ಉಡುಪಿ: ಕೆಮ್ಮಣ್ಣುವಿನಲ್ಲಿ ಗೂಡ್ಸ್ ಟೆಂಪೋದಲ್ಲಿ ಕಲ್ಲಂಗಡಿ ವ್ಯಾಪಾರಿ ಹನುಮಂತ ಎಂಬಾತನ ಮೃತದೇಹವನ್ನು ಕಸದ ರಾಶಿಗೆ ಎಸೆದುಹೋದ ಪ್ರಕರಣದ ತನಿಖೆ ನಡೆಯುತ್ತಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆ ಎಂದು ಕಂಡುಬರುತ್ತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಬಗ್ಗೆ ಜನರು ತಪ್ಪು ತಿಳಿದುಕೊಂಡಿದ್ದಾರೆ. ಮೃತ ವ್ಯಕ್ತಿ ಹಾಗೂ ಇನ್ನಿಬ್ಬರು ಕಲ್ಲಂಗಡಿ ವ್ಯಾಪಾರಿಗಳಾಗಿದ್ದು, ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ನಿನ್ನೆ ಹನುಮಂತ ಕಂಠಪೂರ್ತಿ ಕುಡಿದು ಟೆಂಪೋದಲ್ಲಿ ಮಲಗಿದ್ದರು. ಎಷ್ಟೇ ಎಬ್ಬಿಸಿದರೂ ಏಳದಿದ್ದಾಗ ಟೆಂಪೋದಲ್ಲಿ ಕೊಂಡೊಯ್ದು ಎಸೆದಿದ್ದರು. ಆದರೆ ದೇಹದಲ್ಲಿ ಯಾವುದೇ ಚಲನೆ ಇಲ್ಲದಿದ್ದರಿಂದ ಕೊಲೆ ಮಾಡಿ ಎಸೆದಿದ್ದಾರೆ ಎಂದು ಜನರಾಡಿಕೊಂಡಿದ್ದಾರೆ ಎಂದರು.
ಆದರೆ ವಿಡಿಯೋದಲ್ಲಿ ದೇಹದಲ್ಲಿ ಕೈಕಾಲು ಚಲನೆ ಇರುವುದು ಕಂಡು ಬರುತ್ತದೆ. ಆದಾದ ಮೇಲೆ ಯಾವುದೋ ಕಾರಣದಿಂದ ಆತ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಪರಿಶೀಲನೆ ನಡೆಸಿದಾಗ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿರಲಿಲ್ಲ. ಮೃತ ವ್ಯಕ್ತಿ ಹಾಗೂ ಆತನ ಜೊತೆಗಿದ್ದವರನ್ನು ವಿಚಾರಣೆ ನಡೆಸಿದಾಗ ಅವರು ಸ್ನೇಹಿತರಾಗಿದ್ದು, ಯಾವುದೇ ಗಲಾಟೆ ಆಗಿಲ್ಲ ಎಂಬುದು ತಿಳಿದು ಬಂದಿದೆ. ಸದ್ಯ ಮೃತ ವ್ಯಕ್ತಿಯ ಮನೆಯವರು ಮಾಹಿತಿ ಮೇರೆಗೆ ಅನುಮನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯ ಇದು ಕೊಲೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದರು.