ಕಾರವಾರ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎಟಿಎಂ ಯಂತ್ರ ಅಳವಡಿಸುವ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿದರು.
ಕಾರವಾರ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಕಂದಾಯ ಇಲಾಖೆಯ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿತಾಲೂಕಿನ ಗೋಪಶಿಟ್ಟಾದಲ್ಲಿ ಎಟಿಎಂ ಅವಶ್ಯಕತೆಯ ಬಗ್ಗೆ ಜನತೆ ಗಮನ ಸೆಳೆದಾಗ, ಶಾಸಕರು ದೂರವಾಣಿ ಮೂಲಕ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಮಾತನಾಡಿ, ಎಲ್ಲೆಲ್ಲಿ ಎಟಿಎಂ ಮಷಿನ್ ಅಳವಡಿಕೆ ಮಾಡಬಹುದು ಎಂದು ಪರಿಶೀಲಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಎಟಿಎಂ ಸ್ಥಾಪಿಸಿ ಸಾರ್ವಜನಿಕರಿಗೆ ಬ್ಯಾಂಕುಗಳ ವ್ಯವಹಾರಕ್ಕೆ ಅನುಕೂಲ ಕಲ್ಪಿಸುವ ಕುರಿತು ಚರ್ಚಿಸಿದರು.
ಹಿಂದಿನ ಸಾರ್ವಜನಿಕ ಅಹವಾಲು ಸ್ವೀಕಾರದಲ್ಲಿ ಸುಮಾರು 13 ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 9 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಕೊಂಕಣ ರೈಲು ತಮ್ಮ ಟಿಕೇಟ್ ಕಾಯ್ದಿರಿಸುವ ಪತ್ರಿಕೆಯಲ್ಲಿ ಕೇವಲ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಬಳಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ಬಳಸಿ ಟಿಕೆಟ್ ಕಾಯ್ದಿರಿಸುವ ಕ್ರಮವಾಗಬೇಕು ಎಂದು ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಉತ್ತರಿಸಿ ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಪಿ.ಪಿ.ನಾಯ್ಕ, ತಹಶೀಲ್ದಾರ ಎನ್.ಎಫ್. ನರೋನ, ಪೌರಾಯುಕ್ತರಾದ ಆರ್.ಪಿ.ನಾಯ್ಕ, ಪಿಡಬ್ಲುಡಿ ಎಇಇ, ಕಂದಾಯ ಇಲಾಖೆ ಸಿಬ್ಬಂದಿ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುಭಾಷ ಗುನಗಿ, ಮುಖಂಡರಾದ ರಾಜೇಶ ನಾಯ್ಕ, ಸಾರ್ವಜನಿಕರು ಉಪಸ್ಥಿತರಿದ್ದರು.