ಕಾರವಾರ: ತಾಲೂಕಿನ ಮಾಜಾಳಿ ಹಾಗೂ ದೇವಳಮಕ್ಕಿ ಗ್ರಾಪಂ ತಲಾ ಒಂದು ವಾರ್ಡಿನ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಎರಡು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದಕ್ಕೆ ಶಾಸಕಿ ರೂಪಾಲಿ ನಾಯ್ಕ ಹರ್ಷ ವ್ಯಕ್ತಪಡಿಸಿದ್ದು ಉತ್ತಮ ಕೆಲಸ ಮಾಡುವಂತೆ ಕೋರಿದ್ದಾರೆ.
ಮಾಜಾಳಿಯ ವಾಂಗಡ ವಾರ್ಡಿನಿಂದ ಆಯ್ಕೆಯಾಗಿ, ಮಾಜಾಳಿ ಗ್ರಾ.ಪಂ. ಉಪಾಧ್ಯಕ್ಷೆಯಾಗಿದ್ದ ಲೀನಾ ಕೊಠಾರಕರ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆದು ಚುನಾವಣೆ ನಡೆದು ಮಂಗಲಾ ಬಾಲಕೃಷ್ಣ ಕೊಠಾರಕರ ೩೪೫ ಮತಗಳನ್ನು ಪಡೆದು ಆಯ್ಕೆಯಾದ್ದು ತೀವ್ರ ಸ್ಪರ್ಧೆ ನೀಡಿದ್ದ ವಿದ್ಯಾ ವಿನೋದ ಪವಾರ ೩೩೨ ಮತಗಳನ್ನು ಪಡೆದಿದ್ದಾರೆ.
ಚುನಾವಣೆಯಲ್ಲಿ ಒಟ್ಟು ೧೨ ಮತಗಳು ತಿರಸ್ಕೃತಗೊಂಡಿತು. ಅದರಂತೆ ದೇವಳಮಕ್ಕಿಯ ಶಿರ್ವೆ ವಾರ್ಡಿನ ಸದಸ್ಯರಾಗಿದ್ದ ಹಿರಿಯ ಮುಖಂಡ ಶ್ರೀಪಾದ ಗೌಡರ ಅಕಾಲಿಕ ಮರಣದಿಂದಾಗಿ ಉಪಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂತೋಷ ಗುನಗಿ ೨೨೩ ಮತಗಳನ್ನು ಪಡೆದು ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅವರ ಪ್ರತಿಸ್ಪರ್ಧಿಯಾಗಿದ್ದ ರಮೇಶ ಚಂದು ಗೋವೇಕರ ಕೇವಲ ೨೫ ಮತ ಪಡೆದಿದ್ದಾರೆ. ೬ ಮತಗಳೂ ತಿರಸ್ಕೃತಗೊಂಡವು. ಒಟ್ಟಾರೆ ಗ್ರಾ.ಪಂ. ಉಪಚುನಾವಣೆಯ ಎರಡು ವಾರ್ಡಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರಿಂದ ಶಾಸಕಿ ರೂಪಾಲಿ ಎಸ್. ನಾಯ್ಕರು ವಿಜೇತ ಅಭ್ಯರ್ಥಿಗಳನ್ನು ತಹಸೀಲ್ದಾರ ಕಚೇರಿಯ ಆವರಣದಲ್ಲಿ ಹಾರ ಹಾಕಿ ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ, ಸ್ಥಳೀಯ ಮುಖಂಡ ರಾಜೇಶ ಗೌಡ ಸಾಮಾಜಿಕ ಜಾಲತಾಣದ ಮುಖಂಡ ಕಿಶನ ಕಾಂಬಳೆ ಇದ್ದರು.