ಕಾರವಾರ: ಹರ್ ಘರ್ ತಿರಂಗ ಕಾರ್ಯಕ್ರಮದಡಿ ಶಾಸಕಿ ರೂಪಾಲಿ ಎಸ್.ನಾಯ್ಕ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಪ್ರಮುಖರೊಂದಿಗೆ ಕೈಗೊಂಡ ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ಮನೆ ಮನೆಗೆ ಧ್ವಜ ವಿತರಣಾ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಶಾಸಕರು ತಮ್ಮ ವೈಯಕ್ತಿಕ ಹಣದಲ್ಲಿ 34 ಸಾವಿರ ಧ್ವಜಗಳನ್ನು ಮನೆ ಮನೆಗೆ ಉಚಿತವಾಗಿ ವಿತರಿಸಲು ನೀಡಿದ್ದಾರೆ.
ಕಾರವಾರ ಹಾಗೂ ಅಂಕೋಲಾ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸಂಚರಿಸಿದ ರೂಪಾಲಿ ಎಸ್.ನಾಯ್ಕ ಸಾಂಕೇತಿಕವಾಗಿ ಕೆಲವು ಮನೆಗಳಿಗೆ ತೆರಳಿ ರಾಷ್ಟ್ರಧ್ವಜವನ್ನು ವಿತರಿಸಿ, ಎಲ್ಲ ಮನೆಗಳಿಗೆ ವಿತರಿಸಲು ಗ್ರಾಪಂ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೂಪಾಲಿ ಎಸ್.ನಾಯ್ಕ, ಎಲ್ಲರಿಗೂ ದೇಶ ಮುಖ್ಯ. ದೇಶ ಇದ್ದರೆ ಮಾತ್ರ ನಾವು. ರಾಷ್ಟ್ರಪ್ರೇಮ, ಜಾಗೃತಿ ಸದಾ ಇರಬೇಕು. ಈ ನಿಟ್ಟಿನಲ್ಲಿ ಮನೆ ಮನೆಯಲ್ಲೂ ಧ್ವಜಾರೋಹಣ ನೆರವೇರಿಸುವ ಅವಕಾಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಒದಗಿಸಿಕೊಟ್ಟಿದ್ದಾರೆ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನನ್ನ ಕ್ಷೇತ್ರದ ಕೊಡುಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಆ ಮಹಾನುಭಾವರ ತ್ಯಾಗ, ಬಲಿದಾನವನ್ನು ಸ್ಮರಿಸಿ, ಮನೆ ಮನೆಯಲ್ಲೂ ಧ್ವಜಾರೋಹಣ ನಡೆಸಿ ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕಾಗಿದೆ.
ಕೇವಲ ಸಚಿವರು, ಸಂಸದರು, ಶಾಸಕರು ಧ್ವಜಾರೋಹಣ ನಡೆಸುವುದಷ್ಟೇ ಅಲ್ಲ, ಈ ದೇಶದ ಪ್ರತಿ ಪ್ರಜೆಯೂ ಧ್ವಜಾರೋಹಣ ನಡೆಸುವಂತಾಗಬೇಕು. ಆ ಮೂಲಕ ದೇಶಪ್ರೇಮವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎನ್ನುವ ಸಂಕಲ್ಪದೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮನೆ ಮನೆ ಎದುರು ಆಗಸ್ಟ್ 13ರಂದು ಮುಂಜಾನೆ ಧ್ವಜಾರೋಹಣ ನೆರವೇರಿಸಿ ಆಗಸ್ಟ್ 15ರಂದು ಸಂಜೆ ಧ್ವಜವನ್ನು ಇಳಿಸಬೇಕು. ರಾಷ್ಟ್ರಧ್ವಜಕ್ಕೆ ಎಲ್ಲಿಯೂ ಅವಮಾನ ಆಗದಂತೆ ಎಚ್ಚರಿಕೆ ವಹಿಸಬೇಕು. ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.
ಕ್ಷೇತ್ರದ ಎಲ್ಲ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತಿತರರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರವಾರ ನಗರ ಮಂಡಲ ಅಧ್ಯಕ್ಷರಾದ ನಾಗೇಶ್ಕುರ್ಡೇಕರ, ಗ್ರಾಮೀಣ ಮಂಡಲದ ಸುಭಾಷ್ ಗುನಗಿ, ಅಂಕೋಲಾ ಮಂಡಲಅಧ್ಯಕ್ಷರಾದ ಸಂಜಯ ನಾಯ್ಕ, ಜಿಲ್ಲಾ ಪ್ರಮುಖರಾದ ಜಗದೀಶ ನಾಯಕ, ಯುವ ಮೋರ್ಚಾದ ಪರಭತ್ ನಾಯ್ಕ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.