ಕಾರವಾರ: ಕುಣಬಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜೊಯಿಡಾದಿಂದ ಕಾರವಾರದವರೆಗೆ ಕೈಗೊಂಡಿದ್ದ ಪಾದಯಾತ್ರೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪೂರ್ಣಗೊಳಿಸಿದ್ದಾರೆ. ಒಟ್ಟೂ ೭೦ ಕಿ.ಮೀ. ಪಾದಯಾತ್ರೆಯನ್ನು ನಡೆಸಲಾದ್ದು ೨ ಸಾವಿರಕ್ಕೂ ಅಧಿಕ ಜನ ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಅದರಂತೆ ಗೋವಾ ಸ್ಪೀಕರ್ (Goa Speaker) ಕುಣಬಿಗಳ ಬೇಡಿಕೆಗೆ ಸಾಥ್ ನೀಡಿದ್ದರು.
ಜೊಯಿಡಾದಿಂದ ಆರಂಭವಾದ ಪಾದಯಾತ್ರೆ ಕುಂಬಾರವಾಡ, ಕದ್ರಾ, ಹಣಕೋಣ, ಸದಾಶಿವಗಡ ಮಾರ್ಗವಾಗಿ ಕಾರವಾರ ತಲುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡಿತ್ತು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಕುಣಬಿ ಸಮುದಾಯದವರನ್ನುದ್ದೇಶಿಸಿ ಮಾತನಾಡಿದ ಸ್ಪೀಕರ್ ರಮೇಶ ತವಡಕರ್ ಅವರು, ಗೋವಾ ರಾಜ್ಯದಲ್ಲಿರುವ ಕುಣಬಿಗಳನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿದೆ. ಗೋವಾ ಮತ್ತು ಕರ್ನಾಟಕದಲ್ಲಿರುವ ಕುಣಬಿಗಳ ಆಚಾರ, ವಿಚಾರ ಮತ್ತು ಸಂಸ್ಕೃತಿ ಒಂದೇ ಇದ್ದು, ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ ಎಲ್ಲಾ ಅರ್ಹತೆಗಳಿವೆ ಎಂದರು.
ಅರಣ್ಯವಾಸಿಗಳಾಗಿರುವ ಕುಣಬಿಗಳು ಅರಣ್ಯದ ರಕ್ಷಕರಾಗಿದ್ದಾರೆ. ಭಾಷಾವಾರು ಪ್ರಾಂತ್ಯಗಳು ರಚನೆ ಆಗುವ ಪೂರ್ವದಲ್ಲಿ ಗೋವಾ ಮತ್ತು ಕರ್ನಾಟಕದ ಕುಣಬಿಗಳು ಒಂದೇ ಪ್ರದೇಶದಲ್ಲಿ ನೆಲೆಸಿದ್ದರು. ಈಗ ಎರಡೂ ರಾಜ್ಯಗಳಲ್ಲಿ ಹಂಚಿಹೋಗಿದ್ದರೂ ಆಚಾರ, ವಿಚಾರಗಳು ಒಂದೇ ಆಗಿವೆ ಎಂದರು.
ಮಾಜಿ ಸಚಿವ ಆನಂದ ಅಸ್ನೋಟಿಕರ್ ಕುಣಬಿ ಸಮಾಜದವರನ್ನು ಉದ್ದೇಶಿಸಿ ಮಾತನಾಡಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಕುಣಬಿ ಸಮಾಜ ಸಂಘ ಹಮ್ಮಿಕೊಂಡ ಹೋರಾಟ ನ್ಯಾಯಯುತವಾಗಿದೆ. ಅವರ ಹೋರಾಟಕ್ಕೆ ಯಶಸ್ಸು ಸಿಗುವವರೆಗೆ ನಾವು ಅವರೊಂದಿಗಿದ್ದೇನೆ ಎಂದರು.
ಜಿಲ್ಲಾ ಕುಣಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಷ ಗಾವುಡಾ, ಕಾರ್ಯದರ್ಶಿ ಚಂದ್ರಶೇಖರ್ ಸಾವರಕರ್, ಹಳಿಯಾಳದ ಮಾಜಿ ಶಾಸಕ ಸುನೀಲ ಹೆಗಡೆ, ಮಾಜಿ ಸಚಿವ ಆನಂದ ಅಸ್ನೋಟಿಕರ್, ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹಾಜರಿದ್ದರು. ಕಾರವಾರ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಅವರು ಮನವಿ ಸ್ವೀಕರಿಸಿದರು.