ಕಾರವಾರ: ಕಾಂಗ್ರೆಸ್ ಏನೇ ಘೋಷಣೆ ಮಾಡಿದರೂ ಸಹ ಜನರು ಅದನ್ನು ನಂಬುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸುಭದ್ರ ಸರಕಾರ ಬರಬೇಕಾದರೆ ಜನ ಸುಳ್ಳು ಭರವಸೆಗಳನ್ನು ನಂಬುವುದಿಲ್ಲ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತಪಿಡಿದರು. ಕಾಂಗ್ರೆಸ್ನವರು ಆಡುವ ಮಾತಿಗೂ, ಮಾಡುವ ಕೆಲಸಕ್ಕೂ ವಿಶ್ವಾಸವನ್ನು ಉಳಿಸಿಕೊಂಡಿಲ್ಲ. ಹಾಗಾಗಿ ಅವರ ಮಾತುಗಳನ್ನು ಜನ ನಂಬುವುದಿಲ್ಲ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಅವರನ್ನು ಜರಿದ ಅವರು, ನೀವು ಅಪ್ಪಟ ಹಿಂದೂ ಎಂದು ಹೇಳುತ್ತೀರಿ. ಅದನ್ನು ಗೌರವಿಸುತ್ತೇವೆ. ಆದರೆ, ಮತಾಂತರ ನಿಷೇಧ ಕಾಯ್ದೆಯನ್ನು ಯಾಕೆ ವಿರೋಧಿಸಿದ್ದೀರಿ. ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ಯಾಕೆ ವಿರೋಧಿಸಿದ್ದೀರಿ ಎನ್ನುವುದನ್ನು ಸಾರ್ವಜನಿಕರಿಗೆ ಹೇಳಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಗಳೆಲ್ಲವೂ ಚುನಾವಣೆ ಪ್ರೇರಿತ ಎಂದರು. ರಾಜಸ್ಥಾನ ಚುನಾವಣೆ ಪ್ರಚಾರ ಸಭೆಯಲ್ಲಿ ಅಧಿಕಾರಕ್ಕೆ ಬಂದ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು. ಹೇಳುವಾಗ ಏಕ್, ದೋನ್, ತೀನ್, ಚಾರ್.. ಎಂದು ಎಣಿಕೆ ಮಾಡಿ 10 ದಿನದಲ್ಲಿ ಮನ್ನಾ ಮಾಡುತ್ತೇವೆ ಎಂದಿದ್ದರು. ಇನ್ನೂ ಏಕ್, ದೋನ್, ತೀನ್… ಆಗಲಿಲ್ಲವೇ ಎಂದು ಟೀಕಿಸಿದರು.
ಮೂಡಬಿದರೆಯಲ್ಲಿ ಪ್ರಸಾದ ಪೂಜಾರಿಯನ್ನು ಬಸ್ ನಿಲ್ದಾಣದಲ್ಲಿ ಕೊಚ್ಚಿ ಕೊಂದಾಗ ಪರಿಹಾರ ಕೊಡಲಿಲ್ಲ. ಗಣವೇಶಧಾರಿ ರುದ್ರೇಶ, ಶರತ ಮಡಿವಾಳ ಅವರನ್ನು ಕೊಲೆ ಮಾಡಿದಾಗ ನೀವು (ಕಾಂಗ್ರೆಸ್) ಏನೂ ಮಾಡಿಲ್ಲ. ಹಿಂದುಗಳು ನಿಮ್ಮನ್ನು ವಿರೋಧವಾಗಿದ್ದಾರೆ, ಹಿಂದುತ್ವವನ್ನು ನೀವು ವಿರೋಧಿಸುತ್ತೀರಿ ಎನ್ನುವ ಕಾರಣಕ್ಕೆ ಕರಾವಳಿ ಭಾಗದ ಹಿಂದೂಗಳು ಸೆಟೆದು ನಿಲ್ಲಬಾರದು, ಬಿಜೆಪಿಯನ್ನು ಬೆಂಬಲಿಸಬಾರದು ಎಂದು ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದೀರಿ ಜನ ಅದನ್ನು ನಂಬುವುದಿಲ್ಲ ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು.