ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯ ಹಾಲಕ್ಕಿ, ಕುಣಬಿ ಮತ್ತು ಗೌಳಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಯತ್ನಗಳು ನಡೆಯುತ್ತಿವೆ. ಗೌಳಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಮಾಡಲು ೨೨ ಲಕ್ಷ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಕಾಜುಬಾಗ್ ನಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಕುಣಬಿ ಮತ್ತು ಹಾಲಕ್ಕಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆದಿದೆ. ಯಾವುದೇ ಅಧ್ಯಯನ ವರದಿ ತಿರಸ್ಕೃತಗೊಂಡಿರುವುದಿಲ್ಲ. ಅದರಲ್ಲಿರುವ ಕೆಲವೊಂದು ಅಂಶಗಳು ಮಾತ್ರ ತಿರಸ್ಕೃತಗೊಂಡಿರುತ್ತವೆ. ಆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ನದಿಯಿಂದ ಮರಳು ಸಮಸ್ಯೆ ಬಗೆಹರಿಸಲು ಸಿಆರ್ಝ್ ಸಮಸ್ಯೆ ಎದುರಾಗಿದ್ದರಿಂದ ನಿರ್ಮಾಣ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಈ ಸಮಸ್ಯೆ ಬಗೆಹರಿಸಲು ನದಿಗಳನ್ನು ಹೊರತುಪಡಿಸಿ ಒಳನಾಡಿನಲ್ಲಿರುವ ಹಳ್ಳ-ಕೊಳ್ಳ, ಝರಿ ಮತ್ತು ಡ್ಯಾಂಗಳಿಂದ ಮರಳು ತೆಗೆಯುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಅಣೆಕಟ್ಟುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮರಳು ಶೇಖರಣೆ ಆಗಿದೆ ಎನ್ನುವ ವಿವರಗಳನ್ನು ಕಲೆಹಾಕಿ. ಡ್ಯಾಂಗೆ ಅಪಾಯವಾಗದಂತೆ ನೋಡಿಕೊಂಡು ಮರಳು ತೆಗೆಯಲು ಅನುಮತಿ ನೀಡಲಾಗುತ್ತದೆ ಎಂದರು. ಒಳನಾಡು ಪ್ರದೇಶದಲ್ಲಿರುವ ಸಣ್ಣ ಝರಿ, ಹಳ್ಳ, ಕೊಳ್ಳ, ಕೆರೆ-ಕಟ್ಟೆಗಳಿಂದ ಆ ಸುತ್ತಲಿನ ಪ್ರದೇಶದಲ್ಲಿರುವ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಮರಳು ತೆಗೆಯಲು ಅನುಮತಿ ನೀಡಲಾಗುವುದು. ಇದಕ್ಕೆ ಗ್ರಾಮ ಪಂಚಾಯಿತಿಗೆ ಇಂತಿಷ್ಟು ಶುಲ್ಕ ತುಂಬಬೇಕಾಗುತ್ತದೆ ಎಂದು ಸಚಿವ ಪೂಜಾರಿ ತಿಳಿಸಿದರು.
ಜಿಲ್ಲೆಯಲ್ಲಿ ಬಹುತೇಕ ನದಿಗಳು ಗುಡ್ಡ ಪ್ರದೇಶದಲ್ಲಿ ಹರಿಯುವುದರಿಂದ ಡ್ಯಾಂಗಳಲ್ಲಿ ಮಣ್ಣು ಶೇಖರಣೆ ಆಗುವ ಪ್ರಮಾಣ ಕಡಿಕೆ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಡಲತೀರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ನೂರು ಕೋಟಿ ರೂಪಾಯಿ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದ. ಬಜೆಟ್ ಅಥವಾ ಅದಕ್ಕೆ ಪೂರ್ಣದಲ್ಲಿ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.