ಕಾರವಾರ: ಬಿಜೆಪಿಗರ ಆಗ್ರಹದಂತೆ ಪರೇಶ್ ಮೇಸ್ತಾ ಪ್ರಕರಣವನ್ನು ಅಂದಿನ ಕಾಂಗ್ರೆಸ್ ಸರಕಾರ ಸಿಬಿಐಗೆ ಒಪ್ಪಿಸಿದ್ದು ಇದೀಗ ಬಿಜೆಪಿಗರೇ ಸಿಬಿಐ ವರದಿಯನ್ನು ಒಪ್ಪಲು ಸಿದ್ಧರಿಲ್ಲದಿರುವುದು ಮತ್ತೆ ಇದೇ ವಿಷಯವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸತೀಶ ಸೈಲ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು 2017ರಲ್ಲಿ ಹೊನ್ನಾವರದಲ್ಲಿ ನಡೆದ ಪರೇಶ ಮೇಸ್ತಾ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇದೊಂದು ಹಿಂದೂ ಕಾರ್ಯಕರ್ತನ ಉದ್ದೇಶಪೂರಿತ ಕೊಲೆ ಎಂದು ಹಿಂದೂ ಸಂಘಟನೆಗಳು ಜಿಲ್ಲಾಧ್ಯಂತ ಹೋರಾಟ ಮಾಡಿದ್ದವು. ಬಿಜೆಪಿಯೂ ಇಲ್ಲಿ ಹೋರಾಟ ಮಾಡಿ ಈ ಪ್ರಕರಣದ ಸೂಕ್ತ ತನಿಖೆಗೆ ಅಂದಿನ ಸರಕಾರವನ್ನು ಆಗ್ರಹಿಸಿತ್ತು. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯನವರು ಪ್ರಕರಣವನ್ನು ಸಿಓಡಿ ಗೆ ನೀಡಿದಾಗ ಅದನ್ನು ವಿರೋಧಿಸಿದ ಬಿಜೆಪಿಗರು ಪ್ರಕರಣವನ್ನು ಸಿಬಿಐ ಗೆ ನೀಡುವಂತೆ ಆಗ್ರಹಿಸಿದ್ದರು.
ಬಳಿಕ ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಬಿಐಗೆ ನೀಡಿತ್ತು. ಆ ಬಳಿಕದ ಬೆಳವಣಿಗೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಬಿಜೆಪಿ ಶಾಸಕರೇ ಚುನಾವಣೆಯಲ್ಲಿ ಗೆದ್ದಿದ್ದರು. ಮುಂದೆ ರಾಜ್ಯ ಸರಕಾರದಲ್ಲಿ ಅವರೇ ಆಡಳಿತ ನಡೆಸುತ್ತಿದ್ದರೂ ನಾಲ್ಕೂವರೆ ವರ್ಷಗಳಾದರೂ ಸಿಬಿಐ ಈ ಪ್ರಕರಣದ ಕುರಿತು ವರದಿ ನೀಡಿರಲಿಲ್ಲ. ಇದೀಗ ಸಿಬಿಐ ನ್ಯಾಯಾಲಯಕ್ಕೆ ವರದಿ ನೀಡಿದ್ದು ಪರೇಶ ಮೇಸ್ತಾ ಸಾವು ಆಕಸ್ಮಿಕ ಎಂದು ಹೇಳಿದೆ.
ಆದರೆ ಈಗ ಈ ವರದಿಯನ್ನು ಬಿಜೆಪಿಗರೇ ಒಪ್ಪಿಕೊಳ್ಳದಿರುವುದು ಮತ್ತೆ ಈ ಪ್ರಕರಣದಲ್ಲಿ ರಾಜಕಾರಣ ಮಾಡಲು ಮುಂದಾದಂತಿದೆ ಎಂದರು. ಪರೇಶ ಮೇಸ್ತಾ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ಹೇಳುವುದಾದರೆ ಸರಕಾರ ಈ ಬಗ್ಗೆ ಪುನಃ ತನಿಖೆ ನಡೆಸಲು ಅಪೀಲು ನೀಡಬೇಕು. ಅಥವಾ ಪರೇಶ ತಂದೆಯವರು ಈ ಬಗ್ಗೆ ಪುನಃ ಅಪೀಲು ಹೋಗಬೇಕು. ಇಲ್ಲದಿದ್ದರೆ ಕರಾವಳಿಯ ಶಾಸಕರೆಲ್ಲ ಸೇರಿ ಈ ಬಗ್ಗೆ ಅಪೀಲು ನೀಡಬೇಕು.
ಇದನ್ನು ಬಿಟ್ಟು ವೃಥಾ ವರದಿಯ ಬಗ್ಗೆ ಆರೋಪ ಮಾಡುತ್ತ ಮತ್ತೆ ರಾಜಕಾರಣ ಮಾಡುವುದು ಸರಿಯಲ್ಲ. ನೀವು ಅಪೀಲು ಮಾಡಲು ಆಗದಿದ್ದರೆ ನಮಗೆ ಹೇಳಿ ನಾವೇ ಪರೇಶ ತಂದೆಯೊದಿಗೆ ಚರ್ಚಿಸಿ ಅಪೀಲು ಮಾಡುತ್ತೇವೆ. ಆದರೆ ಮತ್ತೆ ಚುನಾವಣೆ ಬಂದಿದೆ ಎಂದು ಯಾವುದೇ ಕಾರಣಕ್ಕೆ ಈ ಪ್ರಕರಣವನ್ನು ಇಟ್ಟುಕೊಂಡು ಯಾರೂ ರಾಜಕಾರಣ ಮಾಡುವುದು ಬೇಡ ಎಂದರು