ಕಾರವಾರ: ವೀರಶೈವ ಲಿಂಗಾಯಿತರು ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರಕಾರ ಮಾನ್ಯತೆ ನೀಡಬಾರದು. ನ್ಯಾಯಕ್ಕೆ ಆಗ್ರಹಿಸಿ ಆ.30 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್. ಪಕ್ಕೀರಪ್ಪಾ ಹೇಳಿದರು.
ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಲಿಷ್ಠವಾಗಿರುವ ಜಾತಿಗಳಲ್ಲಿ ವೀರಶೈವ ಲಿಂಗಾಯಿತರು ಒಬ್ಬರು. ಇಂಥವರೇ ಈಗಾಗಲೇ ನಕಲಿ ಜಾತಿ ಪ್ರಮಾಣ ಪತ್ರ ಮಾಡಿಸಿಕೊಂಡಿದ್ದಾರೆ. ಈಗ ಅಧಿಕೃತವಾಗಿ ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದರಿಂದ ನೈಜ ದಲಿತ ವರ್ಗಗಳಿಗೆ ಮೀಸಲಾತಿಯಲ್ಲಿ ತೊಂದರೆಯಾಗುತ್ತದೆ ಎಂದರು.
ಲಿಂಗಾಯಿತರು ಮೂಲತಃ ಬ್ರಾಹ್ಮಣ ಸಮುದಾಯದವರಾಗಿದ್ದು, ದಲಿತರನ್ನು ಮುಟ್ಟಿಸಿಕೊಳ್ಳುವುದಿಲ್ಲ. ಸರಕಾರದ ಸವಲತ್ತುಗಳಿಗಾಗಿ ಪರಿಶಿಷ್ಟ ಜಾತಿಗೆ ಸೇರಲು ಬಯಸುತ್ತಿರುವುದೇ ವಿಪರ್ಯಾಸ. ಈಗಾಗಲೇ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಲಯಗಳಲ್ಲಿ ಹಿಂದಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಎಂದು ಹೊರಟಗಳನ್ನು ಮಾಡುತಿದ್ದೇವೆ. ಲಿಂಗಾಯಿತರನ್ನು ಪರಿಶಿಷ್ಟ ಜಾತಿಗೆ ಸೇರಿಸಿದರೆ ನಮ್ಮ ಗಾಯದ ಮೇಲೆ ಬರೆ ಎಳೆದಹಾಗೆ ಆಗುತ್ತದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಹಳ್ಳೆರ, ಎಚ್.ಕೆ. ಶಿವಾನಂದ, ಜಿಲ್ಲಾ ಸಂಚಾಲಕ ಬಸವರಾಜ ಸಂಗಮೇಶ್ವರ, ಮಂಜುನಾಥ್ ಆಗೇರ, ಹನುಮಂತ ಕಟ್ಟಿಮನಿ ಇದ್ದರು.