ತುಮಕೂರು: ಸಂಸ್ಕೃತ ಶ್ಲೋಕಗಳು ಅತ್ಯಂತ ಕ್ಲಿಷ್ಟಕರ ಎನಿಸಿದರೂ ಅದರ ಸಾರಾಂಶಗಳನ್ನು ತುಂಬಾ ಸುಲಭವಾಗಿ ಅರ್ಥಮಾಡಿ ಕೊಳ್ಳಬಹುದು. ಅಕ್ಷರಸ್ಥರು ಪೂರ್ಣಭಾವವನ್ನು ತಿಳಿದು ಅನಂದಿಸಬಹುದು ಎಂದು ಚುಂಚನಗಿರಿ ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಮತ್ತು ಆಗಮ ಮಹಾವಿದ್ಯಾಲಯದ ವಿದ್ವಾಂಸರಾದ ಡಾ. ಕೃಷ್ಣಮೂರ್ತಿ ಜಿ. ಕೂರ್ಸೆಯವರು ತಿಳಿಸಿದರು.
ಅವರು ಗುಬ್ಬಿ ತಾಲ್ಲೂಕು ಕಡಬಾ ಸರ್ಕಾರಿ ಪಬ್ಲಿಕ್ಶಾಲೆಯಲ್ಲಿ ಬೆಲವತ್ತದ ಶ್ರೀವಿವೇಕಸಿದ್ದ ಸಂಸ್ಕೃತ ವೇದಶಾಲೆ ಹಾಗೂ ಅಹೋಬಲ ಯೋಗಾನಂದ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿಂದು ನಡೆದ ‘ಸಂಸ್ಕೃತ ದಿನೋತ್ಸವ’ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತವು ಭಾರತದ ಎಲ್ಲ ಭಾಷೆಗಳಿಗೆ ಅನೇಕ ಪದಗಳನ್ನು ಎರವಲು ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಶಿವಣ್ಣ ಇಂದಿನ ವಿದ್ಯುನ್ಮಾನ ಕಾಲದಲ್ಲಿ ಶಿಕ್ಷಣವು ಮಕ್ಕಳಿಗೆ ಕಡ್ಡಾಯವಾಗಿ ದೊರೆಯಬೇಕು. ಶಿಕ್ಷಣದಿಂದ ವಂಚಿತವಾದ ಮಗುವು ಇಂದಿನ ಸಮಾಜದಲ್ಲಿ ತನ್ನ ಒಂದು ಅಂಗವೇ ಊನವಾದ ಸ್ಥಿತಿಯಲ್ಲಿ ಬದುಕ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾನಿಧ್ಯ ವಹಿಸಿದ್ದ ಬೆಲವತ್ತ ಆಶ್ರಮದ ಶ್ರೀ ದಯಾಶಂಕರಸ್ವಾಮೀಜಿ, ಪ್ರಸ್ತುತ ಸಮಾಜದ ಜನರ ಮನೋಭಾವ ಗಳನ್ನು ಪರಿಗಣಿಸುವುದಾದರೆ ಯಾವುದೇ ಕಾರ್ಯವನ್ನಾಗಲಿ ಬಲವಂತದಿಂದ ಮಾಡಿಸುವಂತಾಗಿದೆ ಹಾಗಾಗಿ ಜನರ ಆಲೋಚನಾ ಮಟ್ಟವನ್ನು ಜಾಗೃತಗೊಳಿಸುತ್ತಾ ಹೋದರೆ ಪರಿವರ್ತನೆ ಉಂಟಾಗಬಹುದು ಎಂದರು. ಸಂಸ್ಕೃತ ವಿದ್ವಾಂಸರಾದ ಸರಸ್ವತಿಯಮ್ಮ ಸುಭಾಷಿತಗಳ ಮೂಲಕ ವಿದ್ಯೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ರವರು ಭಾಗವಹಿಸಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ನಿವೃತ್ತ ಪ್ರಾಧ್ಯಾಪಕ ಬಲರಾಮೇಗೌಡ, ಶಾಲಾಶಿಕ್ಷಕರು, ಗ್ರಾಮದ ಜನತೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಕೃತ ಸುಭಾಷಿತ ಮತ್ತು ಶ್ಲೋಕಗಳುಳ್ಳ ‘ಕಿಶೋರಮಣಿಕಾ’ ಎಂಬ ಪುಸ್ತಕ ಬಿಡುಗಡೆ ಮಾಡಿ ಎಲ್ಲರಿಗೂ ವಿತರಿಸಲಾಯಿತು. ಕೊನೆಯಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಶ್ಲೋಕವಾಚನದ ನಂತರ ಸಿಹಿ ಹಂಚಲಾಯಿತು.