ಕಾರವಾರ: ತಾಲೂಕಿನ ಮಾಜಾಳಿ ಹಿಪ್ಲಿ ಕಡಲತೀರದಲ್ಲಿ ಆಲಿವ್ ರಿಡ್ಲೆ ಪ್ರಜಾತಿಯ ಕಡಲಾಮೆಯು ಮೊಟ್ಟೆ ಇಟ್ಟು ತೆರಳಿದ್ದು ಸ್ಥಳೀಯರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆ ಒಟ್ಟೂ ೧೨೯ ಮೊಟ್ಟೆಗಳನ್ನು ಸಂರಕ್ಷಿಸಿದೆ.
ಸ್ಥಳೀಯ ಮೀನುಗಾರರು ಸೋಮವಾರ ಬೆಳಿಗ್ಗೆ ಕಡಲಾಮೆಯ ಹೆಜ್ಜೆ ಗುರುತುಗಳನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಡಿಸಿಎಫ್ ಪ್ರಶಾಂತ ಕೆ. ಸಿ. ಅವರ ಮಾರ್ಗದರ್ಶನದಲ್ಲಿ ಕಡಲ ವಿಭಾಗದ ಆರ್.ಎಫ್.ಓ. ಪ್ರಮೋದ ನಾಯ್ಕ ನೇತೃತ್ವದಲ್ಲಿ ಡಿಆರ್ಎಫ್ಓ ಗಳಾದ ಚಂದ್ರಕಾಂತ, ಪ್ರಕಾಶ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ೧೨೯ ಕಡಲಾಮೆಯ ಮೊಟ್ಟೆಗಳು ಪತ್ತೆಯಾಗಿವೆ. ತಕ್ಷಣವನ್ನು ಅವುಗಳನ್ನು ಸಂರಕ್ಷಿಸಿ ಇಡಲಾಗಿದೆ. ಆಲಿವ್ ರಿಡ್ಲೆ ಕಡಲಾಮೆಗಳು ನವೆಂಬರ್ ನಿಂದ ಮಾರ್ಚ್ ವರೆಗೆ ಮೊಟ್ಟೆ ಇಡುವ ಕಾಲವಾಗಿದ್ದು ಮೊಟ್ಟೆಗಳಿಂದ ೫೦-೬೦ ದಿನದ ನಂತರ ಮರಿಗಳಾಗಿ ಹೊರಬರುತ್ತವೆ.
ಕಾರವಾರ ತಾಲೂಕಿನ ದೇವಭಾಗ, ಮಜಾಳಿ ಮತ್ತು ಅಂಕೋಲಾದ ಭಾವಿಕೇರಿ ಕಡಲ ತೀರಗಳನ್ನು ಕಡಲಾಮೆ ಮೊಟ್ಟೆ ಇಡುವ ಪ್ರದೇಶಗಳಾಗಿ ಗುರಿತಿಸಲಾಗಿದೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ಸಮುದ್ರ ಜೀವಿಗಳ ಸಂರಕ್ಷಣೆಗಾಗಿ ಕಳೆದ ಸಾಲಿನಿಂದ ಕೋಸ್ಟಲ್ ಆ್ಯಂಡ್ ಮರೈನ್ ಇಕೋಸಿಸ್ಟಮ್ ಸೆಲ್ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ ಕಳೆದ ವರ್ಷ ೧೫೦೦ಕ್ಕೂ ಹೆಚ್ಚಿನ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿ ೧೩೦೦ಕ್ಕೂ ಹೆಚ್ಚಿನ ಮರಿಗಳನ್ನು ಯಶಸ್ವಿಯಾಗಿ ಸಮುದ್ರಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಡಲಾಮೆಗಳು ಮೊಟ್ಟೆ ಇಡಲು ಮುಂದಿನ ದಿನಗಳಲ್ಲಿ ತೀರಕ್ಕೆ ಬರುವ ಸಂಭವ ಹೆಚ್ಚಿದೆ. ಅರಣ್ಯ ಅಧಿಕಾರಿಗಳು ಪ್ರತಿದಿನ ಈ ಬಗ್ಗೆ ಕಡಲತೀರಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಸ್ಥಳೀಯರು, ಮೀನುಗಾರರು ಈ ಬಗ್ಗೆ ಮಾಹಿತಿ ದೊರೆತಲ್ಲಿ ಇಲಾಖೆಗೆ ಮಾಹಿತಿ ಒದಗಿಸುವಂತೆ ಡಿಸಿಎಫ್ ಪ್ರಶಾಂತ ಕೆ. ಸಿ. ಅವರು ತಿಳಿಸಿದ್ದಾರೆ.