ಕಾರವಾರ: ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಗೊಂಡು ಪ್ರಕೃತಿಕ ಪ್ರವಾಸಿ ತಾಣಗಳಾಗಿ ಮಾರ್ಪಟ್ಟು ಗ್ರಾಮೀಣ ಜನರನ್ನ ತನ್ನತ್ತ ಕೈಬೀಸಿ ಕರೆಯುತ್ತಿರುವ ಅಮೃತ ಸರೋವರ ಕೆರೆಗಳ ದಡದ ಮೇಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ನಿರ್ದೇಶನದಂತೆ 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಮೇ. 21ರಂದು ಗ್ರಾಮ ಪಂಚಾಯತಿಗಳ ಜನಪ್ರತಿನಿಧಿಗಳು, ನರೇಗಾ ಕೂಲಿಕಾರರು, ಶಾಲಾ ಮಕ್ಕಳು, ಗ್ರಾಮಸ್ಥರು ಯೋಗಾಭ್ಯಾಸ ಮಾಡುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿ ಸಂಭ್ರಮಿಸಿದರು.
ಕಾರವಾರ ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರ ಭೀಮ್ಕೋಲ್ ಕೆರೆ, ಅಂಕೋಲಾ ತಾಲ್ಲೂಕಿನ ವಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಡಕುಮನೆ ಗ್ರಾಮದ ಅಮೃತ ಸರೋವರ ಕೆರೆ, ಶಿರಸಿ ತಾಲ್ಲೂಕಿನ ಬನವಾಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರ ನಿಂಗನಕಟ್ಟೆ ಕೆರೆ, ಮುಂಡಗೋಡ ತಾಲ್ಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಅಮೃತ ಸರೋವರ ಕೆರೆ, ಹಳಿಯಾಳ ತಾಲ್ಲೂಕಿನ ಮದ್ನಳ್ಳಿ, ಕೆಸರೊಳ್ಳಿ, ಬಿ.ಕೆ. ಹಳ್ಳಿ, ಎನ್.ಎಸ್. ಕೊಪ್ಪ, ಹವಗಿ, ಬೆಳವಟಗಿ ಗ್ರಾಮ ಅಮೃತ ಸರೋವರ, ಯಲ್ಲಾಪುರ ತಾಲ್ಲೂಕಿನ ಕಿರವತ್ತಿ, ಮದ್ನೂರು, ಚಂದಗುಳಿ, ಹೊಸಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರ, ಭಟ್ಕಳ ತಾಲ್ಲೂಕಿನ ಬೆಳಕೆ, ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿ ಅಮೃತ ಸರೋವರ, ಹೊನ್ನಾವರ ತಾಲ್ಲೂಕಿನ ಕಡತೋಕ, ಜಲವಳ್ಳಿ, ಹೇರಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರ, ಸಿದ್ದಾಪುರ ತಾಲ್ಲೂಕಿನ ಅಕ್ಕುಂಜಿ, ಮಳವಳ್ಳಿ, ಹಸವಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರ ಸೇರಿದಂತೆ ಜೋಯಿಡಾ ಹಾಗೂ ದಾಂಡೇಲಿ ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರ ಕೆರೆಗಳ ದಡದ ಮೇಲೆ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗಿದೆ.
ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡವರಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಅಮೃತ ಸರೋವರಗಳ ಮಹತ್ವ, ನರೇಗಾದಡಿ ಅಲಭ್ಯವಿರುವ ಕಾಮಗಾರಿಗಳು, ಸೌಲಭ್ಯಗಳು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಪ್ರಾಕೃತಿಕವಾಗಿ ಪ್ರಶಾಂತ ವಾತಾವರ ಹೊಂದಿದ ಅಮೃತ ಸರೋವರದ ದಡದಲ್ಲಿ ಯೋಗ, ವ್ಯಾಯಾಮ ಮಾಡುವುದರಿಂದ ಆಗುವ ಲಾಭಗಳ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ಐಇಸಿ ಸಂಯೋಜಕರು, ಬಿಎಪ್ಟಿ, ಮೇಟ್, ಶಿಕ್ಷಕರು, ಶಾಲಾ ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.