ಕಾರವಾರ: ದಾವಣೆಗೆರೆಯ ಕೌಶಲ ಅಭಿವೃದ್ಧಿ, ಪುನರ್ವಸತಿ ಮತ್ತು ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರ(ಸಿ.ಆರ್.ಸಿ.)ದ ವತಿಯಿಂದ ಕುಮಟಾದ ಪುರಭವನದಲ್ಲಿ ಜ.೧೪ ರಂದು ವಿಕಲಚೇತನರಿಗಾಗಿ ಮೆಗಾ ಸಹಾಯಕ ಸಾಧನಗಳ ವಿತರಣಾ ಶಿಬಿರ ನಡೆಯಲಿದೆ ಎಂದು ಕೇಂದ್ರದ ನಿರ್ದೇಶಕ ಡಾ. ಉಮಾಶಂಕರ ಮೊಹತಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ಮಾತನಾಡಿದ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರವು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ೨೦೨೩ ರ ಜನವರಿ ೧೪ ರಂದು ಭಾರತದಾದ್ಯಂತ ದಿವ್ಯಾಂಗರಿಗೆ ಸಹಾಯ ಮತ್ತು ಉಪಕರಣಗಳ ವಿತರಣೆಗಾಗಿ ೭೫ ಮೆಗಾ ಶಿಬಿರಗಳನ್ನು ಆಯೋಜಿಸುತ್ತಿದೆ. ದಿವ್ಯಾಂಗ ಜನರ ಕಲ್ಯಾಣ ಮತ್ತು ಬೆಂಬಲಕ್ಕಾಗಿ ಸಚಿವಾಲಯವು ಗುರುತಿಸಿರುವ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಕೂಡ ಒಂದಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಫಲಾನುಭವಿಗಳು ಕುಮಟಾದವರಾಗಿರುವುದರಿಂದ ಇಲ್ಲಿನ ಪುರಭವನದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದರು.