ಕಾರವಾರ: ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಮ್ಮ ರಾಜ್ಯದ ಸಿಬ್ಬಂದಿಗಳನ್ನೇ ನೇಮಕ ಮಾಡುವಂತೆ ಒತ್ತಾಯಿಸಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿರುವ ಅವರು, ನಮ್ಮ ರಾಜ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಹೊರರಾಜ್ಯದ ಸಿಬ್ಬಂದಿಗಳನ್ನು ಹೆಚ್ನೇಮಕಗೊಳಿಸಿ, ಭಾಷೆ ಬರದೇ ನಮ್ಮ ಕರ್ನಾಟಕದ ಸಾಮಾನ್ಯಜನ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ವ್ಯವಹಾರ ಮಾಡಲು ಪರದಾಡುವ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿ ಹೊರ ರಾಜ್ಯದ ಸಿಬ್ಬಂದಿ, ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಯಲ್ಲಿದ್ದಾತ 2.20 ಕೋಟಿ ಹಣವನ್ನು ಬ್ಯಾಂಕ್ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ ವರ್ಗಾವಣೆ ಮಾಡಿ ಲೂಟಿಗೈದಿದ್ದಾನೆ. ಹೀಗೆ ಮತ್ತೆ ಇನ್ನೂ ದೊಡ್ಡ ಲೂಟಿ ಜನರ ಅರಿವಿಗೆ ಬಾರದೇ ಹೊರ ರಾಜ್ಯದ ಸಿಬ್ಬಂದಿಯಿಂದ ನಡೆಯಬಾರದು. ಅದಲ್ಲದೇ ಸಣ್ಣಪುಟ್ಟ ಒಳ್ಳೆಯ ವ್ಯವಹಾರ ಮಾಡುವ ಗ್ರಾಹಕರನ್ನು ಗುರುತಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ಸಣ್ಣಪುಟ್ಟ ಒಳ್ಳೆಯ ವ್ಯವಹಾರ ಮಾಡುವವರು ಮನನೊಂದು ಹೆಚ್ಚಿಗೆ ಬಡ್ಡಿ ನೀಡಲು ಖಾಸಗಿ ಬ್ಯಾಂಕ್ನ ಮೊರೆ ಹೋಗುತ್ತಿದ್ದಾರೆ ಎಂಬುದನ್ನ ಗಮನಕ್ಕೆ ತಂದಿದ್ದಾರೆ.
ಇದೆಲ್ಲವನ್ನು ಪರಿಗಣಿಸಿ ರಾಜ್ಯ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಮ್ಮ ರಾಜ್ಯದ ಸಿಬ್ಬಂದಿಗಳನ್ನೇ ನೇಮಿಸುವ ವ್ಯವಸ್ಥೆಯನ್ನು ಇನ್ನುಮುಂದೆ ಮಾಡಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಮುರ್ಡೇಶ್ವರ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ಸತೀಶ್ ನಾಯ್ಕ, ಉಪಾಧ್ಯಕ್ಷ ಶ್ರೀಧರ ನಾಯ್ಕ, ಕಾರ್ಯದರ್ಶಿ ಜಗದೀಶ ನಾಯ್ಕ, ಗೋವಿಂದ ನಾಯ್ಕ, ವಸಂತ ನಾಯ್ಕ ಬಲ್ಸೆ, ಶ್ರೀಧರ ನಾಯ್ಕ, ಅಣ್ಣಪ್ಪ ನಾಯ್ಕ, ಈಶ್ವರ ನಾಯ್ಕ, ಸುರೇಶ ನಾಯ್ಕ ಕಾರವಾರ ಇದ್ದರು.