ಕಾರವಾರ: ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಹಣಕೋಣದ ಶ್ರೀ ಸಾತೇರಿ ದೇವಿಯ ದರ್ಶನಕ್ಕೆ ಸೋಮವಾರ ಭಕ್ತರ ಸಾಗರವೇ ಹರಿದು ಬಂದಿದೆ.
ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆದಿರುವ ಶ್ರೀ ಸಾತೇರಿ ದೇವಿಯ ದರ್ಶನಕ್ಕೆ ಜಿಲ್ಲೆಯ ಜನರು ಮಾತ್ರವಲ್ಲದೆ ಪಕ್ಕದ ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಜನರು ಆಗಮಿಸುತ್ತಾರೆ. ಸೆ. 4ರ ರಾತ್ರಿ ಬಾಗಿಲು ತೆರೆದು, ಸೆ.5 ರಂದು ಸ್ಥಳೀಯ ಕುಳಾವಿಗಳಿಗೆ, ಹಣಕೋಣ ಗ್ರಾಮದ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತು. ಸೆ. 5ರಿಂದ ಸೆ. 9ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದರಿಂದಾಗಿ ಸೋಮವಾರ ಬೆಳಗ್ಗೆಯಿಂದಲೇ ಸಾವಿರಾರು ಜನರು ಸರದಿ ಸಾಲಿನಲ್ಲಿ ನಿಂತು ಶ್ರೀ ದೇವಿಯ ದರ್ಶನವನ್ನು ಪಡೆದುಕೊಂಡರು. ಹೂ, ಹಣ್ಣು-ಕಾಯಿ, ಸೇರಿದಂತೆ ಉಡಿ ತುಂಬುವ ಮೂಲಕ ತಮ್ಮ ಹರಕೆಗಳನ್ನು ಸೋಮವಾರ ಸಲ್ಲಿಸಿದರು.
ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಸಾತೇರಿ ದೇವಿ ತನ್ನ ಜಾತ್ರಾ ಮಹೋತ್ಸವದಲ್ಲಿ ಮಾತ್ರ ಭಕ್ತರಿಗೆ ದರ್ಶನ ಸೆ.4ರಂದು ಕುಳಾವಿ ಸಮುದಾಯದ ಮಾತೆಯರು, ಕುವರಿಯರಿಂದ ಅಡಕೆ, ಪುರುಷರಿಂದ ತಳಯಿ ಸಲ್ಲಿಸಲಾಗುತ್ತದೆ.
ಸೆ.5ರಿಂದ ಸೆ.9ರವರೆಗೆ ಸಾರ್ವಜನಿಕರಿಗೆ ದೇವಿಯ ದರ್ಶನ ಪಡೆಯಲು ಅವಕಾಶವಿದೆ. ಸೆ.9ರಂದು ಸಂಜೆ 4 ಗಂಟೆಯವರೆಗೆ ಸೇವೆ ಸ್ವೀಕಾರ, 5 ಗಂಟೆಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಪುನಃ ಮುಚ್ಚಲಾಗುತ್ತದೆ.