ಕಾರವಾರ: ಕದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ನೀರನ್ನು ಕೃಸ್ಟ್ ಗೇಟ್ ಗಳ ಮೂಲಕ ಹೊರ ಬಿಡಲಾಗುವುದು ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಗಾಲದ ಅವಧಿಯಲ್ಲಿ ಜಿಲ್ಲಾಡಳಿತವು ನಿಗದಿಪಡಿಸಿರುವ ಕದ್ರಾ ಜಲಾಶಯದ ಗರಿಷ್ಟ ಮಟ್ಟ 31.00 ಮೀಟರಗಳಾಗಿದ್ದು , ಮಂಗಳವಾರ ಬೆಳಿಗ್ಗೆ ಜಲಾಶಯದ ಮಟ್ಟ 31.75 ಮೀಟರ್ ತಲುಪಿದ್ದು ಹಾಗೂ ಒಳಹರಿವಿನ ಪ್ರಮಾಣ 15,628 ಕ್ಯುಸೆಕ್ಸ್ ಆಗಿರುತ್ತದೆ . ಆದ್ದರಿಂದ ಜಲಾಶಯದ ಮಟ್ಟ 31.00 ಮೀಟರಗಳನ್ನು ಕಾಯ್ದುಕೊಳ್ಳ ಬೇಕಾಗಿರುವುದರಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಹೊರಬಿಡಲಾಗುವುದು .
ಭಾರತೀಯ ಹವಾಮಾನ ಇಲಾಖೆಯು ಸೆ. 13 ರಿಂದ ಸೆ. 14 ರ ವರೆಗೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು ಕಾಳಿ ಜಲಾಯನ ಪ್ರದೇಶದಲ್ಲಿ ಹೆಚ್ಚಿನ ಒಳಹರಿವು ಬರುವ ಸಂಭವವಿರುತ್ತದೆ . ಆದ್ದರಿಂದ ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ , ಜಾನುವಾರು ವಗೈರೆಗಳೊಂದಿಗೆ ಜಿಲ್ಲಾಡಳಿತ ನಿಗದಿಪಡಿಸಿರುವ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.
ಕದ್ರಾ ಅಣೆಕಟ್ಟೆಯ ಕೆಳಭಾಗದಲ್ಲಿ ದೋಣಿ ಸಂಚಾರ , ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ನಡೆಡೆಸದಂತೆ ಕೆಪಿಸಿ ಕದ್ರಾದ ಕಾರ್ಯ ನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.