ಕಾರವಾರ: ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಕಾರವಾರ ತಾಲ್ಲೂಕಿನ ಅಮದಳ್ಳಿಯಲ್ಲಿ ನಡೆದಿದೆ.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ನಡೆಸುತ್ತಿರುವ ಐಆರ್ಬಿ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಗ್ರಾಮಸ್ಥರು ಪ್ರತಿನಿತ್ಯ ಓಡಾಡಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಅಗಲೀಕರಣ ನಡೆಸಿರುವ ಐಆರ್ಬಿ ಬಸ್ ನಿಲ್ದಾಣ, ಸರ್ವೀಸ್ ರಸ್ತೆಯಂತಹ ಅಗತ್ಯ ವ್ಯವಸ್ಥೆಗಳನ್ನ ಕಲ್ಪಿಸಿಲ್ಲ. ಅಲ್ಲದೇ ಗ್ರಾಮದಲ್ಲಿ ಹಾದು ಹೋಗಿರುವ ರಸ್ತೆಯನ್ನ ಎರಡು ಕಡೆಗಳಲ್ಲಿ ಅನಗತ್ಯವಾಗಿ ಬೈಪಾಸ್ ಮಾಡಿದ್ದು ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ಅಲ್ಲದೇ ಹೆದ್ದಾರಿಯಿಂದ ಮಳೆ ನೀರು ಹರಿದುಹೋಗಲು ಕಾಲುವೆ ವ್ಯವಸ್ಥೆಯನ್ನ ಸಹ ಕಲ್ಪಿಸಿಲ್ಲವಾಗಿದ್ದು ಇದು ಮಳೆಗಾಲದಲ್ಲಿ ಸಂಕಷ್ಟ ಉಂಟುಮಾಡಲಿದೆ. ಹೀಗಾಗಿ ಈ ಎಲ್ಲ ಅವ್ಯವಸ್ಥೆಗಳನ್ನ ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟಿಸಿದ ಗ್ರಾಮಸ್ಥರು, ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್ಬಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.