ಕಾರವಾರ: ವಿವಿಧ ಹಬ್ಬದ ಸಂದರ್ಭದಲ್ಲಿ ನಗರದ ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿ,ಈಗ ಮತ್ತೆ ಹೂ,ಹಣ್ಣು ಮಾರುಕಟ್ಟೆಗೆ ನಗರಸಭೆ ಅಧಿಕಾರಿಗಳು ಸ್ಥಳಾಂತರಕ್ಕೆ ಕ್ರಮಕೈಗೊಂಡಿದ್ದಾರೆ.
ಸ್ಥಳಾಂತರದ ಸಂದರ್ಭದಲ್ಲಿ ಒಲ್ಲದ ಮನಸ್ಸಿನಲ್ಲೇ ಕೆಲವರು ಸ್ಥಳಾಂತರಗೊಂಡರೆ,ಇನ್ನೂ ಕೆಲವರು ನಗರಸಭೆಯ ಸಿಬ್ಬಂದಿಯೊಂದಿಗೆ ವಾಗ್ವಾದವನ್ನೂ ನಡೆಸಿದ್ದಾರೆ. ಕಳೆದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಅಂಗಡಿಗಳನ್ನು ಸ್ಥಳಾಂತರಿಸಲು ನಗರಸಭೆಯವರು ಮುಂದಾಗಿದ್ದರು. ಆಗ ವ್ಯಾಪಾರಸ್ಥರು ರಸ್ತೆ ತಡೆದು, ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.ನಗರಸಭೆಯ ಸಿಬ್ಬಂದಿ, ಈ ಬಾರಿ ಐವರು ಪೊಲೀಸ್ ಸಿಬ್ಬಂದಿ ಹಾಗೂ ಒಂದು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನದೊಂದಿಗೆ ಅಂಗಡಿಗಳನ್ನು ಸ್ಥಳಾಂತರಿಸಲು ಮುಂದಾದರು.
ಕಳೆದ ಬಾರಿ ಪ್ರತಿಭಟನೆಯಾದ ಬಳಿಕ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಲಾಗಿತ್ತು. ಶ್ರಾವಣ, ನಾಗರ ಪಂಚಮಿ ಹಾಗೂ ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬಗಳು ಇರುವುದರಿಂದ ಶ್ರಾವಣ ಮುಗಿಯುವ ವರೆಗೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುತ್ತು. ಅಲ್ಲದೇ ಕಳೆದ ಮೂರು ದಿನಗಳಿಂದ ನಗರಸಭೆಯ ಕಸ ಸಂಗ್ರಹಿಸುವ ವಾಹನದಲ್ಲಿ ಬೀದಿ ಬದಿಯ ಹೂ ಹಣ್ಣು ವ್ಯಾರಿಗಳು ಹೊಸ ಮಾರುಕಟ್ಟೆಗೆ ಸ್ಥಾಳಾಂತರಗೊಳ್ಳಬೇಕು ಎಂದು ದ್ವನಿವರ್ಧಕದಲ್ಲಿ ಸೂಚನೆ ನೀಡಲಾಗುತಿತ್ತು.
ನಗರಸಭೆ ಅಧಿಕಾರಿಗಳು ಸ್ಥಳಾಂತರಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ ಕೆಲವರು ಸ್ಪಂದನೆ ನೀಡಿದರೆ ಇನ್ನೂ ಕೆಲವರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದರು. ಈ ವೇಳೆ, ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಸರಿಯಲ್ಲ.ವ್ಯಾಪಾರದ ನಡುವೆ ಅಂಗಡಿಗಳನ್ನು ತೆಗೆಯಲು ಹೇಳುವುದು ಸರಿಯಲ್ಲ. ಹೊಸ ಮಾರುಕಟ್ಟೆಯ ಬಳಿ ಜನರ ಸುಳಿವೇ ಇರುವುದಿಲ್ಲ ದಿನವಿಡೀ ಕೂತರು ನೂರು ರೂ. ಗಿಟ್ಟುವುದಿಲ್ಲ. ಅಂತಹ ಜಾಗದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಮಾರುಕಟ್ಟೆ ಕಟ್ಟಿಸಿದರೆ ಏನು ಪ್ರಯೋಜನ ಎಂದು ಕೆಲವರು ಸಿಬ್ಬಂದಿಯೊಡನೆ ವಾದ ಮಾಡಿದರು. ಆದರೂ ಸಹ ಪೊಲೀಸರ ಸಹಕಾರದೊಂದಿಗೆ ನಗರಸಭೆ ಅಧಿಕಾರಿಗಳನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರ ಮಾಡಿದರು