ಕಾರವಾರ: ಜಿಲ್ಲೆಯಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕಿಪ್ತ ಪರಿಷ್ಕರಣೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 11,61,687 ಮತದಾರರಿದ್ದು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಹೊಸ ಹೆಸರು ಸೇರ್ಪಡೆಗಾಗಿ ನಮೂನೆ-6 ರಲ್ಲಿ, ಹೆಸರು ಕಡಿಮೆಗೊಳಿಸಲು ನಮೂನೆ-7 ರಲ್ಲಿ ಮತ್ತು ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8 ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ ಬಿ.ಎಲ್.ಓಗಳಿಗೆ ಸಲ್ಲಿಸಬೇಕು ಎಂದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳಾಪಟ್ಟಿಯಂತೆ ನ. 09 ರಿಂದ ಡಿ. 08 ರೊಳಗೆ ಆಕ್ಷೇಪಣೆಗಳನ್ನು ನೀಡಲು ಕಾಲಾವಕಾಶ ಕಲ್ಪಿಸಿಕೊಡಲಾಗಿದೆ ಎಂದರು. ಹಾಗೂ ಬಿ.ಎಲ್.ಓ ಗಳು ಪ್ರತಿ ಮನೆ ಮನೆ ಹೋಗಿ ಮತದಾರರ ಮಾಹಿತಿ ಕಲೆಹಾಕವ ಸಮೀಕ್ಷೆ ನಡೆಯುತ್ತಿರುತ್ತದೆ ಎಂದರು. ಹಾಗೂ ಮತದಾರರ ಪಟ್ಟಿ ವಿಶೇಷ ಆಂದೋಲನ ಡಿಸೆಂಬರ್ 03 ಮತ್ತು ಡಿಸೆಂಬರ್ 04 ರಂದು ನಡೆಯಲಿದೆ ಹಾಗೂ ಅಂತಿಮ ಮತದಾರರ ಪಟ್ಟಿಯ ಅಧಿಸೂಚನೆ 05 ಜನವರಿ 2023 ರಂದು ಪ್ರಕಟವಾಗುತ್ತದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಚುನಾವಣೆ ಶಾಖೆ ಶಿರಸ್ತದಾರ್ ಎಂ. ಶೇಖ್, ಬಿ.ಜೆ.ಪಿ ಪಕ್ಷದಿಂದ ದಾಮೋದರ ರಾಯ್ಕರ, ಕಾಂಗ್ರೇಸ್ ಪಕ್ಷದಿಂದ ವಿನೋದ ಬಿ. ನಾಯಕ, ಪ್ರಭಾಕರ ಮಾಳ್ಸೇಕರ್ ಹಾಗೂ ಜೆ.ಡಿ.ಎಸ್ ಪಕ್ಷದಿಂದ ಅಜೀತ ಆರ್. ಪೋಕಳೆ ಇದ್ದರು.