ಕಾರವಾರ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರನ್ನು ಯೋಜನೆಯ ವ್ಯಾಪ್ತಿಗೆ ತರಲು ಉದ್ದೇಶಿಸಿರುವುದರಿಂದ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ನಡೆಸಲಾಯಿತು.
ಮುಂಡಗೋಡ ತಾಲೂಕಿನ ಕಾತೂರು ಗ್ರಾಮ ಪಂಚಾಯತ್ ನ ಮೂಡಸಾಲಿ ಗ್ರಾಮದಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರಿಗೆ ಉದ್ಯೋಗ ಖಾತ್ರಿಯಡಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು. ಖಾತ್ರಿಯಡಿ ಮಹಿಳೆಯರ ಭಾಗವಹಿಸುವಿಕೆಯನ್ನು ಶೇ. 60ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಮ ಗ್ರಾಮದಲ್ಲಿನ ಮಹಿಳೆಯರನ್ನೆ ಮೇಟ್ ಆಗಿ ಪರಿಗಣಿಸಿ ಕೆಲಸ ಕೈಗೊಳ್ಳುವಂತೆ ತಿಳಿಸಲಾಯಿತು.
ಈ ವೇಳೆ ತಾಲೂಕು ಪಂಚಾಯತ್ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾತನಾಡಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೇಯೇ ಉದ್ಯೋಗ ಖಾತ್ರಿ ಕೆಲಸದಲ್ಲಿಯೂ ಪುರುಷರಿಗೆ ಸರಿಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದೆಷ್ಟೋ ಕುಟುಂಬಗಳು ಇಂದು ನರೇಗಾದಡಿ ಕೂಲಿ ಮಾಡಿ ಜೀವನ ಕಟ್ಟಿಕೊಂಡಿವೆ ಎಂದರು.
ಕೂಲಿಕಾರ ಮಹಿಳೆ ಶೇಕವ್ವ ಟೋಪೋಜಿ ಹೇಳುವಂತೆ ದಿನನಿತ್ಯ ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಊರಿನಲ್ಲಿ ಹೊಲಗದ್ದೆಗಳಲ್ಲಿ ಕೆಲಸಕ್ಕೆ ಹೋದರೆ ಸಂಬಳದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಅಂತ ಬೇಧಭಾವ ಮಾಡುತ್ತಾರೆ. ಆದ್ರೆ ನರೇಗಾದಡಿ ಕೆಲಸ ಮಾಡಿದರೆ ಎಲ್ಲರಿಗೂ 309ಕೂಲಿ ನೀಡುತ್ತಾರೆ. ಇದರಿಂದ ಖಾತರಿ ಕೆಲಸಕ್ಕೆ ಬರಲು ಮುಂದಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಶೋಧ ಹನುಮಾಪುರ, ಸದಸ್ಯ ಪಿರಣ್ಣ ಲಕ್ಮಾಪುರ, ಅಶೋಕ ಮುಸಲನವರ್, ಬಿಎಫ್ ಟಿ ಉಷಾ ಹಾನಗಲ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇದ್ದರು.