ಬಂಟ್ವಾಳ: ಭಾಷೆ ಸಾಹಿತ್ಯಮಯವಾಗದೇ ಇದ್ದಲ್ಲಿ ಕಿರಣನಿಲ್ಲದ ಸೂರ್ಯನಂತೆ ಎಂದು ಮಾಣಿಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ವೀಕ್ಷಿತಾ ಹೇಳಿದರು.
ಅವರು ಓಜಾಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ತಾ.ಕನ್ನಡ ಕನ್ನಡ ಸಾಹಿತ್ಯ ಪರಿಷತ್ ನ ಮಕ್ಕಳ ಕಲಾ ಲೋಕದ ನೇತೃತ್ವದಲ್ಲಿ ಆಯೋಜಿಸಲಾದ ಬಂಟ್ವಾಳ ತಾಲೂಕು 16ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನದಲ್ಲಿ ಮಕ್ಕಳಲ್ಲಿ ಸಾಹಿತ್ಯದ ಪ್ರೀತಿ ಕುಂದುತ್ತಿದೆ, ಈ ನಿಟ್ಟಿನಲ್ಲಿ ಭಾಷೆಯ ಒಳಗಿನ ಸಾಹಿತ್ಯ ಪ್ರಕಾರವನ್ನು ಮಕ್ಕಳ ಸಾಹಿತ್ಯ ಸಮ್ಮೇಳನಗಳ ಮೂಲಕ ಹೆಚ್ಚಿಸುವ ಕಾರ್ಯ ಆಗಬೇಕಿದೆ ಎಂದರು.
ಸಮ್ಮೇಳನಾಧ್ಯಕ್ಷೆ ,ಓಜಾಲ ಹಿ.ಪ್ರಾ.ಶಾಲೆಯ 6ನೇತರಗತಿ ವಿದ್ಯಾರ್ಥಿ ಶ್ರುತಿಕಾ ಮಾತನಾಡಿ, ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ ಸಹಕಾರಿಯಾಗಿದ್ದು, ಸಾಹಿತ್ಯ ರಚನೆಯ ಚಟುವಟಿಕೆಗಳು ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಸರ್ಕಾರ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವ ಕಾರ್ಯ ಮಾಡಬೇಕು. ಸಾಹಿತ್ಯವನ್ನು ಬಲಪಡಿಸುವ ಜತೆಗೆ ಭಾಷೆಗೆ ಬಲ ತುಂಬುವ ಕಾರ್ಯ ಮಾಡಬೇಕು ಎಂದವರು ಆಶಯ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನದ ಮೆರವಣಿಗೆಯನ್ನು ಇಡ್ಕಿದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಸಧೀರ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಓಜಾಲ ಎಸ್. ಡಿ. ಎಂ. ಸಿ. ಅಧ್ಯಕ್ಷ ಚಿದಾನಂದ ಕನ್ನಡ ಧ್ವಜಾರೋಹಣ ನಡೆಸಿದರು. ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ರವರು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನಡೆಸಿದರು. ಹಿರಿಯ ಸಾಹಿತಿ ವಿ. ಬಿ. ಕುಳಮರ್ವ ಅವರು 5 ಮಕ್ಕಳ ಪುಸ್ತಕ ಹಾಗೂ ಒಂದು ಸಂಪಾದಿತ ಪುಸ್ತಕ ಬಿಡುಗಡೆ ಮಾಡಿದರು.
ಪಾಣಾಜೆ ವಿವೇಕ ಹಿ.ಪ್ರಾ.ಶಾಲೆಯ ಧನ್ವೀ ರೈ ಪಾಣಾಜೆ, ಇಡ್ಕಿದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ಡಾ.ಗೋವರ್ಧನ್ ರಾವ್, ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ ಉಪಸ್ಥಿತರಿದ್ದರು.
ಓಜಾಲ ಶಾಲೆಯ ವಿದ್ಯಾರ್ಥಿಗಳಾದ ಹರ್ಷಿಣಿ ಬಳಗ ಪ್ರಾರ್ಥಿಸಿದರು. ಹೃದಯ್ ಸ್ವಾಗತಿಸಿದರು. ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ್ ಎಂ. ಬಾಯಾರು ಪ್ರಸ್ತಾವನೆಗೈದರು. ಕನ್ಯಾನ ಸರಸ್ವತಿ ವಿದ್ಯಾಲಯದ ಅಭಿವೈಷ್ಣವಿ ಸಾದಂಗಾಯ ವಂದಿಸಿದರು. ಮಿತ್ತೂರು ದ.ಕ. ಜಿ. ಪ. ಉ. ಹಿ. ಪ್ರಾ. ಶಾಲೆಯ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ತಂಡದಿಂದ ಕಿರುನಾಟಕ ಪ್ರದರ್ಶನ
ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಿರುನಾಟಕ ಪ್ರದ್ರಶನದಲ್ಲಿ ಮಿತ್ತೂರು ಶಾಲೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ನ ಅಪಾಯಗಳ ಕುರಿತಾದ ನಾಟಕ, ಅಳಕೆ ಮಜಲು ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಹಾಸ್ಯ ಪ್ರಹಸನವನ್ನು, ಓಜಾಲ ಶಾಲೆಯ ವಿದ್ಯಾರ್ಥಿಗಳು ಕೆಂಪು ಹೂ ನಾಟಕವನ್ನು, ಸೂರ್ಯ ಶಾಲೆಯ ವಿದ್ಯಾರ್ಥಿಗಳು ಪರಿಸರ ಪ್ರೀತಿ, ಪ್ರಾಣಿಗಳ ರಕ್ಷಣೆ ನಾಟಕ ಹಾಗೂ ಪಡಿಬಾಗಿಲು ಶಾಲೆಯ ವಿದ್ಯಾರ್ಥಿಗಳು ರಾಮಧಾನ್ಯ ಚರಿತೆ… ನಾಟಕವನ್ನು ಪ್ರದರ್ಶಿಸಿದರು.
ಚಿತ್ತ ಚಿತ್ತಾರದಲ್ಲಿ ಪೆರುವಾಯಿ, ಕಂಬಳಬೆಟ್ಟು ಹಿ.ಪ್ರಾ.ಶಾಲೆ, ವಿಟ್ಲ ಹಿ.ಪ್ರಾ.ಶಾಲೆ, ಮಿತ್ತೂರು ಹಿ.ಪ್ರಾ.ಶಾಲೆ, ಓಜಾಲ ಹಿ.ಪ್ರಾ.ಶಾಲೆ, ನೀರ್ಕಜೆ ಹಿ.ಪ್ರಾ.ಶಾಲೆ, ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆ, ಪಡಿಬಾಗಿಲು ಹಿ.ಪ್ರಾ.ಶಾಲೆ ಹಾಗೂ ಚಂದಳಿಕೆ ಶಾಲಾ ಮಕ್ಕಳು ಚಿತ್ರ ಚಿತ್ತಾರ ದಲ್ಲಿ ನೃತ್ಯ, ಹಾಡು, ಚಿತ್ರ ಬಿಡಿಸುವ ಮೂಲಕ ಸಂಭ್ರಮಿಸಿದರು.
ಬಳಿಕ ನಡೆದ ಸಾಹಿತ್ಯ ಗೋಷ್ಠಿ ಗಳಲ್ಲಿ ವಿದ್ಯಾರ್ಥಿಗಳು ಆಶುಭಾಷಣ, ಕಥೆ, ಕವನ ಗಳನ್ನು ವಾಚಿಸಿದರು.