ಕಾರವಾರ: ನಗರದಲ್ಲಿ ಬೀದಿಬದಿಯಲ್ಲಿ ವ್ಯಾಪಾರ ಮಾಡುವವರ ಸಮಸ್ಯೆಗಳು ಬಗೆಹರಿಸುವಂತೆ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ನಗರಸಭೆಗೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದಾರೆ.
ಶಿವಾಜಿ ವೃತ್ತದ ಸಮೀಪ ಕೋರ್ಟ್ ರಸ್ತೆಯಲ್ಲಿ ಒಣ ಮೀನು ಮಾರಾಟ ಮಾಡುವ ಮತ್ತು ಗ್ರಾಮೀಣ ಮತ್ತು ಸಂಚಾರ ಪೊಲೀಸ್ ಠಾಣೆಯ ಎದುರು ತರಕಾರಿ ಮಾರಾಟ ಮಾಡುತ್ತಿದ್ದವರನ್ನು ಮೀನು ಮಾರುಕಟ್ಟೆ ಮತ್ತು ತರಕಾರಿ ಮಾರುಕಟ್ಟೆಯ ಮಧ್ಯದಲ್ಲಿರುವ ಜಾಗದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ವ್ಯಾಪಾರ ಮಾಡುವವರರು ಹೆಚ್ಚಿದ್ದು ಸ್ಥಳಾವಕಾಶ ಕಡಿಮೆ ಇರುವುದರಿಂದ ತರಕಾರಿ ಮತ್ತು ಮೀನು ಮಾರಾಟ ಮಾಡುವ ವ್ಯಾಪಾರಿಗಳಲ್ಲಿ ಜಾಗದ ಕುರಿತು ಗೊಂದಲ ಶುರುವಾಗಿದೆ.
ಒಣ ಮೀನು ಮಾರಾಟ ಮಾಡುವ ಮಹಿಳೆಯರಿಗೆ ತೊಂದರೆ ಆಗುತ್ತಿದೆ ಎನ್ನುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಅವರು ನಗರಸಭೆ ಅಧ್ಯಕ್ಷ ನಿತೀನ್ ಪಿಕಳೆ ಮತ್ತು ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ಅವರಿಗೆ ಕರೆ ಮಾಡಿ ಗೊಂದಲವನ್ನು ಶೀಘ್ರ ಬಗೆಹರಿಸುವಂತೆ ಮನವಿ ಮಾಡಿದರು. ಮೀನು ಮಾರುಕಟ್ಟೆಯ ಸಮೀಪ ಒಣ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಅಧ್ಯಕ್ಷರು ಮತ್ತು ನಗರಸಭೆ ಆಯುಕ್ತರ ಬಳಿ ತಾಕೀನು ಮಾಡಿದರು.
ಮೀನುಗಾರ ಮುಖಂಡರಾದ ಗಣೇಶ ಹರಿಕಂತ್ರ, ಕಿಶೋರ ಖಾರ್ವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.