ಕಾರವಾರ: ಸೆ.17ರ ಇಂಟರ್ನ್ಯಾಷಲ್ ಕೋಸ್ಟಲ್ ಕ್ಲೀನಪ್ ಡೇ ಆಚರಣೆಗೆ ಕಡಲ ನಗರಿ ಕಾರವಾರ ಸಜ್ಜಾಗಿದೆ. ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನಗರದ ಡಿಸಿ ಕಚೇರಿಯಲ್ಲಿ ಮಾಹಿತಿ ನೀಡಿದರು.
ಸೆ.16ರಂದೇ ರಾಜ್ಯಪಾಲರು ಕಾರವಾರಕ್ಕೆ ಬರಲಿದ್ದು, 17ರಂದು ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಗೋವಾ ರಾಜ್ಯಪಾಲರೊಂದಿಗೆ ಗೋವಾ ಮತ್ತು ಕರ್ನಾಟಕದ ಗಡಿ ಜಿಲ್ಲೆಗಳಾದ ಉತ್ತರಕನ್ನಡ ಹಾಗೂ ಬೆಳಗಾವಿಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಗೋವಾದಲ್ಲೇ ಮಹತ್ವದ ಸಭೆಯನ್ನೂ ನಡೆಸಲಿದ್ದಾರೆ.
ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಸಾರ್ವಜನಿಕರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಗೋವಾ ಮತ್ತು ಕರ್ನಾಟಕದ ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳ ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೆ.17ರಂದು ಉಬಯ ರಾಜ್ಯಗಳ ರಾಜ್ಯಪಾಲರ ಜಂಟಿ ಸಭೆ ನಡೆಯಲಿದೆ. ಗೋವಾದ ಮಡಗಾಂವದಲ್ಲಿ ಮಧ್ಯಾಹ್ನ ಈ ಸಭೆ ನಡೆಯಲಿದೆ.
ಗೋವಾ ಉತ್ತರ, ಗೋವಾ ದಕ್ಷಿಣ ಜಿಲ್ಲೆ ಮತ್ತು ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಅವರನ್ನೊಳಗೊಂಡು ಸಭೆ ನಡೆಯಲಿದೆ.
ಕಾರವಾರದಲ್ಲಿ ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ ಗೋವಾಕ್ಕೆ ಹೋಗಲಿದ್ದಾರೆ ಎಂದರು.
ಗೋವಾದ ಉತ್ತರ, ದಕ್ಷಿಣ ಜಿಲ್ಲೆಗಳು ಮತ್ತು ಅದೇ ರಾಜ್ಯದ ಗಡಿ ಹಂಚಿಕೊಂಡಿರುವ ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯ ನಡುವೆ ಇರುವ ವಿವಿಧ ಸಮಸ್ಯೆಗಳ ಬಗ್ಗೆ ಪ್ರತಿ ವರ್ಷವೂ ಅಧಿಕಾರಿಗಳ ಸಭೆ ನಡೆಯುತ್ತದೆ. ಈ ಬಾರಿ ಮಾತ್ರ ಎರಡೂ ರಾಜ್ಯಗಳ ರಾಜ್ಯಪಾಲರ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿದೆ.