ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರ ಬೇಡಿಕೆಗಳಿಗೆ ಅನುಗುಣವಾಗಿ ಅಮೃತ ಸರೋವರ, ಅಂಗನವಾಡಿ, ರಾಜೀವ ಗಾಂಧಿ ಸೇವಾ ಕೇಂದ್ರ, ಚರಂಡಿ, ಶಾಲಾ ಶೌಚಾಲಯ ಹಾಗೂ ಕಾಂಪೌಂಡ್ ನಿರ್ಮಾಣದಂತ ಕಾಮಗಾರಿಗಳನ್ನು ಕೈಗೊಂಡು ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾನ್ಯ ಮುಖ್ಯ ಇಂಜಿನಿಯರ್ ಸಿ.ಕೆ. ಮಲ್ಲಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಶಿರಸಿ ತಾಲೂಕಿನಲ್ಲಿ ನರೇಗಾದಡಿ ಅಭಿವೃದ್ಧಿಗೊಳಿಸಲಾದ ಕಾಮಗಾರಿಗಳ ಸ್ಥಳಕ್ಕೆ ಗುರುವಾರ ಸ್ವತಃ ಬೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.ಕಳೆದ ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನರೇಗಾದಡಿ ಮಣ್ಣು, ನೀರು ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಗಳು ಜಲಶಕ್ತಿ ಹಾಗೂ ಅಮೃತ ಸರೋವರ ಅಭಿಯಾನದಲ್ಲಿ ಜನಸಾಮಾನ್ಯರಿಗೆ ಅಗತ್ಯವಿರುವಂತಹ ಕಾಮಗಾರಿ ತೆಗೆದುಕೊಂಡು ಜನರಿಗೆ ಕೂಲಿ ಕೆಲಸ ನೀಡುವುದರ ಜೊತೆಗೆ ಶಾಶ್ವತ ಆಸ್ತಿ ಸೃಜನೆ ಮಾಡಿರುವುದು ಶ್ಲಾಘನಿಯ ಸಂಗತಿ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ವಿಭಿನ್ನ ಭೌಗೋಳಿಕ ಗುಣಲಕ್ಷಣ ಹೊಂದಿದ್ದು, ಬೇರೆ ಜಿಲ್ಲೆಗಳಿಗೆ ಮಾದರಿಯಾಗುವಂತಹ ಅಭಿವೃದ್ಧಿ ಕೆಲಸಗಳು ಜಿಲ್ಲೆಯಲ್ಲಿ ಜರುಗಿವೆ. ಅಮೃತ ಸರೋವರಕ್ಕೆ ಆಯ್ಕೆ ಮಾಡಿರುವ ಕೆರೆ ಕಾಮಗಾರಿಗಳನ್ನು ಅನುಭವಿ ಹಿರಿಯ ಇಂಜಿನಿಯರ್ಗಳಿಂದ ಪಡೆದುಕೊಂಡ ತಾಂತ್ರಿಕ ಅಂಶಗಳಡಿ ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಿದರೆ ಜನರಿಗೆ, ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಯಾವುದೇ ಕಾರಣಕ್ಕೂ ನೀರಿನ ಅಭಾವ ಉಂಟಾಗುವುದಿಲ್ಲ ಎಂದರು.ಇದಕ್ಕು ಮುನ್ನ ಜೋಯಿಡಾ ತಾಲೂಕಿನ ಅಣಶಿ ಗ್ರಾಪಂ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ನರೇಗಾದಡಿ ನಿರ್ಮಾಣಗೊಂಡ ಶಾಲಾ ಶೌಚಾಲಯ ಕಟ್ಟಡ, ಉಳವಿ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರ, ದಾಂಡೇಲಿ ತಾಲೂಕಿನ ಬಡಾಕಾನ ಶಿರ್ಡಾ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರ, ಹಳಿಯಾಳ ತಾಲೂಕಿನ ಎನ್. ಎಸ್. ಕೊಪ್ಪ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರ, ಯಲ್ಲಾಪುರ ತಾಲೂಕಿನ
ಕಣ್ಣಿಗೇರಿ ಗ್ರಾಮಪಂಚಾಯತ್ನ ಬೆಳಗೇರಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ, ಚಂದಗುಳಿ ಗ್ರಾಮ ಪಂಚಾಯತ್ನ ಅಮೃತ ಸರೋವರ, ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮ ಪಂಚಾಯತ್ ರಾಜೀವ ಗಾಂಧಿ ಸೇವಾಕೇಂದ್ರ, ಬನವಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಅಮೃತ ಸರೋವರ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಕೆಲವು ತಾಂತ್ರಿಕ ಸಲಹೆಗಳನ್ನು ನೀಡಿದರು. ಜೊತೆಗೆ ಸ್ಥಳದಲ್ಲಿದ್ದ ಜನಪ್ರತಿನಿಧಿಗಳು, ಪಿಆರ್ಇಡಿಯ ಎಇಇ, ನರೇಗಾ ತಾಂತ್ರಿಕ ಸಂಯೋಜಕರು, ಸಹಾಯಕರಿಂದ ಅಗತ್ಯ ಮಾಹಿತಿ ಪಡೆದುಕೊಂಡರು.