ಕಾರವಾರ: ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಜಿಲ್ಲಾ ಪಂಚಾಯತಿಯಿಂದ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ನಗರದ ಜಿಪಂ ಕಚೇರಿ ಬಳಿ ಧರಣಿ ನಡೆಸಿದರು.
ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತನಿಖೆಗೆ ಒತ್ತಡ ಹೇರಿದ ಮೇಲೆ ಎರಡು ಬಾರಿ ಪ್ರಕರಣದ ತನಿಖೆ ನಡೆಸಲಾಗಿದೆ. ತನಿಖಾ ವರದಿಯಲ್ಲಿ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. ಆದರೆ ಭ್ರಷ್ಟಾಚಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪಂಚಾಯತಿ ವಿಫಲವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಹಣಕಾಸು ಆಯೋಗದ ನಿಧಿಯನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕ್ರಿಯಾ ಯೋಜನೆಗಳಿಗೆ ಮಂಜೂರಾತಿ ಪಡೆಯದೆ ಸಂಬಂಧಿಗಳ ಹೆಸರಿನಲ್ಲಿ ಬಿಲ್ ಪಾವತಿಸಿಕೊಳ್ಳಲಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.ಹೆಬಳ ಗ್ರಾಪಂನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡುವ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸುಮಾರು ಒಂದು ವರ್ಷದ ಹಿಂದೆಯೇ ದೂರು ನೀಡಲಾಗಿತ್ತು. ಆದರೆ ಈ ಬಗ್ಗೆ ತಿಂಗಳುಗಳು ಕಳೆದರೂ ತನಿಖೆ ಮಾಡದಿದ್ದ ಕಾರಣ ಹಲವಾರು ಬಾರಿ ಒತ್ತಾಯಪಡಿಸಿದ ಮೇರೆಗೆ ಒಂದಲ್ಲ ಎರಡು ಬಾರಿ ತನಿಖೆ ನಡೆಸಲಾಗಿದೆ. ತನಿಖಾ ವರದಿಯಲ್ಲಿರುವಂತೆ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ.
ಆದರೆ ಭ್ರಷ್ಟಚಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪಂಚಾಯತ್ ಆಡಳಿತ ವಿಫಲವಾಗಿದೆ. ಜೊತೆಗೆ ಭ್ರಷ್ಟಾಚಾರದ ಆರೋಪ ಹೊತ್ತಿರುವ ಪಿ.ಡಿ., ಅವರನ್ನು ಬೇರೊಂದು ಪಂಚಾಯಿತಿಗೆ ವರ್ಗಾವಣೆ ಮಾಡಿ ಅಲ್ಲಿಯೂ ಕೂಡ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಿದೆ. ಕೆ.ಸಿ.ಎಸ್.ಆರ್ನಿಯಮಾವಳಿ ಪ್ರಕಾರ ತಪ್ಪತಸ್ಥರಿಗೆ ಶಿಕ್ಷೆ ನೀಡುವ ಬದಲು ಸಹಕಾರ ನೀಡಿದಂತಾಗಿದೆ. ಇಷ್ಟಾದರೂ ನಾವು ಪ್ರತಿಭಟನೆ ಮಾಡುವುದಾಗಿ ಸಂಬಂದಿಸಿದ ಆಡಳಿತಕ್ಕೆ ಮನವಿ ಪತ್ರ ನೀಡಿದರೂ ಸಹ ಯಾವುದೇ ರೀತಿಯ ಶಿಸ್ತುಕ್ರಮ ಕೈಗೊಳ್ಳಲು ವಿಫಲವಾಗಿದ್ದು, ಪ್ರತಿಭಟನೆ ಮಾಡಿಯೇ ನ್ಯಾಯ ಕೇಳಬೇಕೆ೦ಬ ಕಟ್ಟುಪಾಡಿಗೆ ಬಿದ್ದಿರುವ ಜಿಲ್ಲಾಡಳಿತ ಸಾರ್ವಜನಿಕರ ಅರ್ಜಿಗೆ ಸ್ಪಂದಿಸುವುದಾಗಲಿ ಹಿಂಬರಹ ನೀಡುವುದಾಗಲಿ ಮಾಡದೇ ಇರುವುದು ಹೈಕೋರ್ಟ್ ನಿರ್ದೇಶನವನ್ನು ಸಹ ಉಲ್ಲಂಘಿಸಿದೆ.
ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಎಲ್ಲರ ಮೇಲೆ ನಿಯಮಾನುಸಾರ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಈ ಮೂಲಕ ಒತ್ತಾಯಿಸಲಾಗಿದೆ. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ 4(1)ಎ ಮತ್ತು 4(1)ಬಿ ಪಾಲನೆ ಮಾಡಿಲ್ಲ ಎಂದು ಆರೋಪ ಮಾಡಲಾಗಿದೆ.ಪ್ರತಿಭಟನೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಎಚ್.ಕೆ.ರಮೇಶ್ ಕುಣಿಗಲ್, ಉಪಾಧ್ಯಕ್ಷ ಶಂಕರ ನಾಯ್ಕ, ರಾಜ್ಯ ಕಾರ್ಯದರ್ಶಿ ಮಂಜುನಾಥ ಆರ್., ಮೋಹನ ಕುಮಾರ್, ರುದ್ರೆಶ್ ವಾಸು, ಚೆನ್ನೆಯ್ಯ ವಸ್ತ್ರದ್, ಶಂಕರಪ್ಪ,ರಾಜು ನಾಯ್ಕ, ನಾಗೇಂದ್ರ ನಾಯ್ಕ,ಶಂಕರ್ ನಾಯ್ಕ, ಲಕ್ಷ್ಮಣ ಮೊಗೇರ್ ಹಾಗೂ ಇನ್ನಿತರು ಇದ್ದರು.