ಕಾರವಾರ: ಇಲ್ಲಿನ ಬಂದರಿನ ಮೂಲಕ ಆಮದು, ರಫ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಡಾಂಬರು ಮತ್ತು ಮೊಲಾಸಿಸ್ ಸಾಗಿಸುವ ಕುರಿತು ಖಾಸಗಿ ಕಂಪೆನಿಯ ಜೊತೆಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಟ್ಯಾಂಕರ್ ಮಾಲೀಕರ ಸಂಘದ ಸದಸ್ಯರು ಸಭೆ ನಡೆಸಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ನೇತೃತ್ವದಲ್ಲಿ ಸಭೆ ನಡೆಯಿತು. ಡಾಂಬರು ಮತ್ತು ಮೊಲಾಸಿಸ್ ರಸ್ತೆ ಮಾರ್ಗದ ಮೂಲಕ ಸಾಗಿಸಲು ಖಾಸಗಿ ಕಂಪನಿಗಳು ಸ್ಥಳೀಯ ಟ್ಯಾಂಕರ್ ಲಾರಿಗಳನ್ನು ಬಳಸುತ್ತಿಲ್ಲ ಎಂದು ಜಿಲ್ಲಾ ಟ್ಯಾಂಕರ್ ಮಾಲಿಕರ ಸಂಘದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿತ್ತು.
ಕಾರವಾರದ ವಾಣಿಜ್ಯ ಬಂದರು ಮೂಲಕ ಡಾಂಬರು ಆಮದು ಆಗಿ ಅದನ್ನು ಹುಬ್ಬಳ್ಳಿ ಮಾರ್ಗದ ಮೂಲಕ ಬೆಳಗಾವಿ, ಹುಬ್ಬಳ್ಳಿ ಕಡೆಯಿಂದ ಮೊಲಾಸಿಸ್ ಕಾರವಾರ ವಾಣಿಜ್ಯ ಬಂದರಿಗೆ ಬಂದು ಹಡಗುಗಳ ಮೂಲಕ ರಪ್ತಾಗುತ್ತದೆ. 16 ಚಕ್ರದ ಲಾರಿಗಳು ಮತ್ತು 10, 12 ಚಕ್ರದ ಲಾರಿಗಳ ನಿರ್ವಹಣೆ ವೆಚ್ಚ ಒಂದೇ ಆಗಿದೆ. ಹಾಗಾಗಿ 10, 12 ಚಕ್ರದ ಲಾರಿಗಳು ತಮಗೆ ಉಪಯೋಗ ಆಗುವುದಿಲ್ಲ. ಕಂಪನಿಗೆ ಸೇರಿದ 12 ಚಕ್ರದ ಲಾರಿಗಳೇ ಬಳಕೆ ಇಲ್ಲದೆ ನಿಂತಿವೆ. 16 ಚಕ್ರದ ಲಾರಿಗಳು ಹೆಚ್ಚು ಬಳಕೆಯಲ್ಲಿವೆ ಎಂದು ಕಂಪನಿಗಳ ಮುಖ್ಯಸ್ಥರು ತಿಳಿಸಿದರು.
ಬೆಳಗಾವಿಯ ಮಾಜಿ ಶಾಸಕ ಫಿರೋಜ್ ಶೇಠ್ ಅವರು ತಮ್ಮ ಐಎಂಸಿಎಲ್ ಕಂಪನಿ ಪರವಾಗಿ ಹಾಜರಿದ್ದರು. ಮೈಸೂರು ಮರ್ಕಂಟೈಲ್ ಕಂಪನಿ ಲಿ. ಸಿಇಒ ಎಚ್.ಎಸ್. ಶೆಟ್ಟಿ ಉಪಸ್ಥಿತರಿದ್ದರು.