ಕಾರವಾರ: ವಾಹನಗಳ ಪಾರ್ಕಿಂಗ್ ಗೆ ಶುಲ್ಕ ವಿಧಿಸುವುದನ್ನು ನಗರಸಭೆ ಹಿಂಪಡೆಯುವಂತೆ ಆಗ್ರಹಿಸಿ ಅಂಗಡಿಕಾರರು ಕಾರವಾರ ನಗರಸಭೆಯೆದುರು ಜಮಾಯಿಸಿ ಒತ್ತಾಯಿಸಿದ್ದಾರೆ.
ಕಾರವಾರ ನಗರಸಭೆಯಿಂದ ಪಾರ್ಕಿಂಗ್ ಶುಲ್ಕ ವಿಧಿಸಲು ಯೋಜನೆ ರೂಪಿಸಲಾಗಿದ್ದು, ಇದರಲ್ಲಿ ವ್ಯಾಪಾರಸ್ಥರುಗಳನ್ನೂ ಸೇರಿಸಲಾಗಿದೆ.ಅಂಗಡಿಗೆ ಬರಲು ದಿನನಿತ್ಯ ವಾಹನ ಬಳಕೆ ಮಾಡಬೇಕಾಗುತ್ತದೆ. ಪ್ರತಿನಿತ್ಯ ಶುಲ್ಕ ಪಾವತಿಸಲು ಸಾಧ್ಯವೇ? ನಗರಸಭೆ ಅನ್ಯಾಯ ಮಾಡುತ್ತಿದೆ ಎಂದು ವ್ಯಾಪಾರಸ್ಥರು ನಗರಸಭೆಯೆದುರು ಜಮಾವಣೆಗೊಂಡು ಆಕ್ರೋಶ ಹೊರಹಾಕಿದ್ದಾರೆ. ಈ ಶುಲ್ಕ ವಿಧಿಸುವ ನಿರ್ಧಾರವನ್ನು ಹಿಂಪಡೆಯದಿದ್ದರೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲ ಹೊತ್ತು ನಡೆದ ಚರ್ಚೆಯಲ್ಲಿ ಅಂತಿಮವಾಗಿ, ನಗರಸಭೆಗೆ ಶುಲ್ಕ ವಿಧಿಸುವ ಯಾವುದೇ ಉದ್ದೇಶವಿಲ್ಲ. ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಗರಸಭೆಯಿಂದ ಸ್ಪಷ್ಟಪಡಿಸಿದ ಬಳಿಕ ವ್ಯಾಪಾರಸ್ಥರು ತೆರಳಿದರು.