ಕಾರವಾರ: ಕಾಂಗ್ರೆಸ್ ಈ ಸಲ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ, ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ಭರವಸೆ ವ್ಯಕ್ತಪಡಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬಿಜೆಪಿಯ ದುರಾಡಳಿತ, ನಿಷ್ಕ್ರೀಯತೆ, ಭ್ರಷ್ಟಾಚಾರ ಜನರಲ್ಲಿ ಬೇಸರ ಹುಟ್ಟಿಸಿದೆ. ಕಾಂಗ್ರೆಸ್ ಸರಕಾರ ಅಧಿಕಾರಿದಲ್ಲಿದ್ದಾಗ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು, ಬಡವರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದೇವೆ. ಆದರೆ ಈಗ ಯಾವುದೇ ಅಭಿವೃದ್ಧಿಗಳು ಕಾಣುತ್ತಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಬರುತ್ತಾರೆ. ಅದರ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಜಿಲ್ಲೆಯ ಪ್ರವಾಸೋದ್ಯಮ, ಮೀನುಗಾರಿಕೆಯ ಬಗ್ಗೆ ಮತ್ತು ಅದಕ್ಕಾಗಿ ಒದಗಿಸಲಾಗುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾತಾಡಬಹುದಿತ್ತು. ಆದರೆ ನಿರಾಸೆ ಆಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಭೇಟಿ ನೀಡಿರುವದರಿಂದ ಜಿಲ್ಲೆಗೆ ಆಗಿರುವ ಲಾಭ ಮತ್ತು ಖರ್ಚುಗಳ ಬಗ್ಗೆಯೂ ಚರ್ಚೆಯಾಗಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಇದೊಂದು ನಿಷ್ಕ್ರಯ ಸರ್ಕಾರ. ಈ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಗಗನ ಮುಟ್ಟಿದೆ. ಬಹುತೇಕ ಎಲ್ಲ ಇಲಾಖೆಗಳಲ್ಲಿ ಕೆಲಸ ಮಾಡಲು ಅಧಿಕಾರಿಗಳೇ ಇಲ್ಲ. ಸರ್ಕಾರದಲ್ಲಿ ಜವಾಬ್ದಾರಿ ಹೊತ್ತವರಿಗೆ ತಮ್ಮ ಕೆಲಸದ ಬಗ್ಗೆ ಕಾಳಜಿ ಇರಬೇಕು. ಆದರೆ ಬಿಜೆಪಿ ಸರ್ಕಾರ ಜನರಿಗೆ ಪೊಳ್ಳು ಭರವಸೆಗಳನ್ನು ನೀಡುವುದರಲ್ಲೆ ಕಾಲ ಕಳೆದಿದೆ. ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಕರಾವಳಿ ಉತ್ಸವ, ಕದಂಬ ಉತ್ಸವ, ಸ್ಕೂಬಾ ಡೈವಿಂಗ್ ನಂಥಹ ಯೋಜನೆಗಳಿಗೆಲ್ಲ ಒತ್ತುಕೊಟ್ಟು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ನಮ್ಮ ಸರ್ಕಾರ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಮಾಡಿದ್ದಾದರೂ ಏನು ಎಂಬುದನ್ನು ತಿಳಿಸಲಿ. ಸದ್ಯ ರಾಜ್ಯದಲ್ಲಿ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಪರವಿದ್ದು, ಜಿಲ್ಲೆಯಲ್ಲೂ ೬ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮತದಾರರು ಬಹುಮತದಿಂದ ಆರಿಸಬೇಕು.
ಈ ಸರ್ಕಾರದಿಂದ ರಾಜ್ಯದ ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚಿದೆ. ಪ್ರವಾಸೋದ್ಯಮದ ಮೂಲಕವೇ ಜಿಲ್ಲೆಯ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ನೀಡಬಹುದಾಗಿತ್ತು. ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ಜಿಲ್ಲೆಯ ಪ್ರವಾಸೋದ್ಯಮ ಬೆಳೆಯಲು ಹೆಚ್ಚಿನ ಒತ್ತು ನೀಡಲಾಗಿತ್ತು. ಲೈಫ್ಗಾರ್ಡಗಳನ್ನು ನಿಯೋಜಿಸಿ, ಅವರಿಗೆ ತರಬೇತಿ ಹಾಗೂ ಗೌರವಧನವನ್ನು ನೀಡಿ ಕಡಲತೀರಗಳಲ್ಲಿ ನೇಮಿಸಲಾಗಿತ್ತು ಎಂದರು.