ಕಾರವಾರ: ಕಳೆದ ವಿಧಾನ ಸಭೆಚುನಾವಣೆಯಲ್ಲಿ ಮೀನುಗಾರ ಯುವಕ ಪರೇಶ ಮೇಸ್ತಾರ ಸಾವನ್ನು ಕೊಲೆ ಎಂದು ಬಿಂಬಿಸಿ, ನಮ್ಮ ವಿರುದ್ಧ ಅಪಪ್ರಚಾರ ಮಾಡಿ ಚುನಾವಣೆಯನ್ನು ಗೆದ್ದಿದ್ದರು. ಅದಕ್ಕಾಗಿ ನ. ೨೪ ರಂದು ಕುಮಟಾದ ಮಣಕಿ ಮೈದಾನದಲ್ಲಿ ಜನಜಾಗೃತಿ ಸಮಾವೇಶವನ್ನು ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ನಗರದ ಪತ್ರಿಕಾಭವದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ಕಾಂಗ್ರೆಸ್ ಮುಖಂಡರಾದ ರಣದೀಪ ಸುರ್ಜೆವಾಲಾ, ಸತೀಶ ಜಾರಕಿಹೊಳಿ, ವೀರಪ್ಪ ಮೊಯಿಲಿ, ಮಯೂರ ಜೈಕುಮಾರ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಮೂಲಕ ಪರೇಶ ಮೇಸ್ತಾರ ಸಾವಿನ ಸತ್ಯವನ್ನು ಹೊರಹಾಕಿ, ಜನರಲ್ಲಿ ಜನಜಾಗೃತಿ ಮೂಡಿಸಲಾಗುವುದು. ಈಗ ಸಿ.ಬಿ.ಐ. ಪರೇಶ ಮೇಸ್ತಾರ ಸಾವಿನ ಪ್ರಕರಣಕ್ಕೆ `ಬಿ’ ರಿಪೋರ್ಟ ಹಾಕಿ, ಇದೊಂದು ಸಹಜ ಸಾವು ಎಂದು ತಿಳಿಸಿದೆ. ಆದರೂ ಬಿಜೆಪಿಯವರು ಪ್ರಕರಣವನ್ನು ಮತ್ತೆ ಮರುಪರಿಶೀಲನೆ ಹೆಸರಿನಲ್ಲಿ ಜನರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದ್ದು, ಮರುಪರಿಶೀಲನೆ ನಡೆಸಿದರೂ ಆದಷ್ಟು ಬೇಗ ಚುನಾವಣೆಯ ಮೊದಲೆ ಸತ್ಯ ಬಹಿರಂಗವಾಗಬೇಕು. ಮತ್ತೆ ಹಿಂದಿನ ಬಾರಿಯಂತೆ ಕಾಂಗ್ರೆಸ್ ಬಗ್ಗೆ ಚುನಾವಣೆಯಲ್ಲಿ ಅಪಪ್ರಚಾರ ಮಾಡಲು ಬಿಜೆಪಿ ಪರೇಶ ಮೇಸ್ತಾರ ಸಾವಿನ ಪ್ರಕರಣವನ್ನು ಬಳಸಬಾರದು ಎಂದು ಮಾಜಿ ಶಾಸಕ ಸತೀಶ ಸೈಲ್ ಆಗ್ರಹಿಸಿದರು.