ಕಾರವಾರ: ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಭಾವನೆ ಮೂಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಕ್ಕಳು ಹೆಚ್ಚು ಹೆಚ್ಚು ಅಂಕ ಗಳಿಸಿ ಉನ್ನತ ಶಿಕ್ಷಣವನ್ನು ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಕ್ಕಳ ಭವಿಷ್ಯದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿದೆ. ಶಿಕ್ಷಣದ ಜೊತೆಗೆ ಉತ್ತಮ ನಡತೆಯೂ ಅವಶ್ಯಕ ಎಂದು ತಹಸೀಲ್ದಾರ್ ಎನ್.ಎಫ್ ನೋರೋನಾ ಹೇಳಿದರು.
ಅವರು ಕಾರವಾರದ ಆಜಾದ್ ಯೂತ್ ಕ್ಲಬ್ ಶಿಕ್ಷಕರ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ನ ಜಾರ್ಜ್ ಫರ್ನಾಂಡಿಸ್ ಮಾತನಾಡಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಸೇವೆ ಮಾಡುವುದು ನಮ್ಮ ಕರ್ತವ್ಯ. ಶಿಕ್ಷಣವು ನಮ್ಮ ಶಾಶ್ವತ ಆಸ್ತಿ. ನಮಗೆ ಶಿಕ್ಷಣ ನೀಡಿದ ಶಿಕ್ಷಕರನ್ನು ನಾವು ಸದಾ ಗೌರವಿಸಬೇಕು. ಸಂಪೂರ್ಣವಾಗಿ ಗ್ರಾಮೀಣ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಸಮಾಜ ಸೇವಕರಾದ ಆರ್. ಜಿ ಪ್ರಭುರವರು ಮಾತನಾಡಿ ನಾವು ಶಿಕ್ಷಣಕ್ಕೆ ಹೆಚ್ಚು ಬೆಲೆ ಕೊಡಬೇಕು ಭೂಮಿಗೆ ಮಳೆ ಅವಶ್ಯಕತೆ ಇರುವ ಹಾಗೆ ವಿದ್ಯಾರ್ಥಿಗಳಿಗೆ ಗುರುವಿನ ಅನುಗ್ರಹದ ಅವಶ್ಯಕತೆ ಇದೆ. ಶಿಕ್ಷಣ ನಿಂತ ನೀರಾಗದೆ ಹರಿಯುವ ನದಿಯಂತೆ ಆಗಿರಬೇಕು ಎಂದು ಹೇಳಿದರು.
ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕ್ ವಿಭಾಗದ ಪ್ರಾಧ್ಯಾಪಕರಾದ ಇಮ್ರಾನ್ ತೀರ್ಥಹಳ್ಳಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕರ ಪ್ರಯತ್ನ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ತಾವು ಕಲಿಸಿದ ಕಲಿಕೆ ಫಲಕಾರಿಯಾದರೆ ಅದೇ ಅವರಿಗೆ ಗುರುದಕ್ಷಿಣೆ ಯಂತಾಗುತ್ತದೆ. ಗುರುವಿನ ಉಪಕಾರವನ್ನು ಎಂದು ಮರೆಯದೆ ಸದಾ ಸ್ಮರಿಸುತ್ತಿರಬೇಕು ಎಂದರು.ಅಧ್ಯಕ್ಷತೆಯನ್ನು ವಹಿಸಿದ ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು ಶೇಖ್ ಮಾತನಾಡಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವುದು ಸಂಘ-ಸಂಸ್ಥೆಗಳ ಕರ್ತವ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಪೂರ್ಣವಾಗಿ ಗ್ರಾಮೀಣ ವಿಭಾಗದಲ್ಲಿಯೇ 37 ವರ್ಷ ಸೇವೆ ಸಲ್ಲಿಸಿ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಹರೂರ್ ದಲ್ಲಿ ನಿವೃತ್ತಿಯಾದ ಶಿಕ್ಷಕಿ ಪುಷ್ಪ ಸದಾನಂದ ನಾಯ್ಕ ಇವರಿಗೆ ಹಾಗೂ ಎಸ್. ಎಸ್. ಎಲ್. ಸಿ ಯಲ್ಲಿ ಶೇ.99.84 ಅಂಕಗಳಿಸಿ ತಾಲೂಕಿಗೆ ಪ್ರಥಮ ಬಂದ ಸೆಂಟ್ ಜೋಸೆಫ್ ಪ್ರೌಢ ಶಾಲೆಯ ವಿದ್ಯಾರ್ಥಿ ಗಣೇಶ್ ಶಂಕರ್ ರಾಯ್ಕರ್ ಇವರನ್ನು ಇವರು ಮಾಡಿದ ಸಾಧನೆಯನ್ನು ಗುರುತಿಸಿ ಶಾಲು ಹೊದಿಸಿ ಫಲಪುಷ್ಪ ಹಾಗೂ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಫೈರೋಜಾ ಬೇಗಂ ಶೇಖ್ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಕ್ಲಬ್ ನ ಅಧ್ಯಕ್ಷ ಮಹಮ್ಮದ್ ಉಸ್ಮಾನ್ ಶೇಖ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕ್ಲಬ್ ನ ಕಾರ್ಯದರ್ಶಿ ನಿಧಿ ನಾಯಕ, ಮಾಜಿ ಅಧ್ಯಕ್ಷರಾದ ರೋಹನ್ ಭುಜಲೆ, ರಾಷ್ಟ್ರ ಯುವ ಪ್ರಶಸ್ತಿ ವಿಜೇತ ಮೊಹಮ್ಮದ್ ಹಸನ್, ಸದಾನಂದ ನಾಯ್ಕ, ಅಬ್ದುಲ್ ಅಜೀಜ್ ಶೇಖ್, ಅಮೀನುದ್ದೀನ್ ಶೇಖ್, ರೀಜ್ವಾನ ಶೇಖ್, ಕುಲ್ಸುಂಬಿ ಶೇಖ್, ಶಂಕರ್ ರಾಯ್ಕರ್, ಜಾವೀದ್ ಶೇಖ್, ಮೋಹಿದ್ದಿನ್ ಶೇಖ್, ಕೋಸ್ಟಲ್ ಮಿನರಲ್ಸ್ ನ ಫಾರೂಕ್ ಶೇಖ್, ಸೈಯದ್ ಹುಸೇನ್, ಜಹೀರ್ ಮತ್ತಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ದಿವಂಗತ ಆಯಿಶಾಭಿ ಶೇಖ್ ಹಾಗೂ ದಿವಂಗತ ಹಸನ್ ಶೇಖ್ ರವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿತ್ತು.