ಕಾರವಾರ: ಪ್ರಧಾನಿ ಮೋದಿ ವಿರುದ್ಧ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನೀಡಿದ ವಿವಾದಾತ್ಮಕ ಹೇಳಿಕೆ ವಿರುದ್ಧ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಭುಟ್ಟೋ ಅವರ ಭಾವಚಿತ್ರವನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಯೋತ್ಪಾದನೆಯ ಕುರಿತಾಗಿ ಮಾತನಾಡುತ್ತಿದ್ದ ಭುಟ್ಟೀ ಗುಜರಾತಿನಲ್ಲಿ ನಡೆದ ನರಮೇಧಕ್ಕೆ ಕಾರಣವಾದ ವ್ಯಕ್ತಿಯು ಇನ್ನು ಭಾರತದಲ್ಲಿಯೇ ಇದ್ದಾರೆ. ಅಲ್ಲದೇ ಅವರು ಪ್ರಧಾನಿಯೂ ಆಗಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ೨೦ ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ನಗರದ ಸುಭಾಷ ಸರ್ಕಲ್ ಬಳಿ ಜಮಾಯಿಸಿ ಭುಟ್ಟೋ ಅವರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಭುಟ್ಟೋ ಅವರ ಭಾವಚಿತ್ರ ಹಿಡಿದು ಧಿಕ್ಕಾರ ಕೂಗಿ ಬೆಂಕಿ ಹಚ್ಚಿ ದಹನ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ನಾಯಕ ಹಾಗೂ ಎನ್. ಎಸ್. ಹೆಗಡೆ ಪಾಕಿಸ್ತಾನ ಹಾಗೂ ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳಂತೆ.
ನೇರವಾಗಿ ಪ್ರಧಾನಮಂತ್ರಿ ವಿರುದ್ಧ ಮಾಡುವ ವ್ಯಕ್ತಿಗತ ಆರೋಪವನ್ನು ಸಹಿಸಲಾಗುವುದಿಲ್ಲ. ಕಳೆದ ೨೦೧೪ ರಿಂದ ಮೋದಿ ಅವರು ಇಡೀ ವಿಶ್ವಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸಲಾರದೆ ಈ ರೀತಿ ಅವಹೇಳನ ಮಾಡುತ್ತಿದ್ದು ಇದನ್ನು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ನೇರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ನಾಗರಾಜ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ಚಂದ್ರು ಎಸಳೆ, ನಗರ ಅಧ್ಯಕ್ಷ ನಾಗೇಶ ಕುರುಡೇಕರ, ಗ್ರಾಮೀಣ ಅಧ್ಯಕ್ಷ ಸುಭಾಷ ಗುನಗಿ, ಮನೋಜ ಭಟ್, ಕಿಶನ್ ಕಾಂಬಳೆ, ಪ್ರದೀಪ ಸುಜಾತ ತಮ್ಸಿ ರೋಷನಿ ಮಾಳ್ಸೇಕರ ಮುಂತಾದವರು ಇದ್ದರು.