ಕಾರವಾರ: ತಾಲೂಕಿನ ಮಾಜಾಳಿಯಲ್ಲಿರುವ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿ ತಮ್ಮ ವಿವಿಧ ಬೇಡಿಕೆಗಳ ಮನವಿ ಜಿಲ್ಲಾಡಳಿತಕ್ಕೆ ಶನಿವಾರ ಸಲ್ಲಿಸಿದರು. ಕಾಲೇಜಿನಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟೀನ್ ವ್ಯವಸ್ಥೆ ಇಲ್ಲ. ಅಲ್ಲದೇ ಸಾರಿಗೆ ಸಮಸ್ಯೆಯೂ ಇದೆ. ಮುಖ್ಯವಾಗಿ ಶಿಕ್ಷಕರ ಕೊರತೆಯೂ ಇದ್ದು ಇದು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಳಲು ತೋಡಿಕೊಂಡರು. ಕಾಲೇಜಿನ ಕೆಲವು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಕಾಲೇಜಿನಲ್ಲಿ ಸುಮಾರು ೬೦೦ ವಿದ್ಯಾರ್ಥಿಗಳಿದ್ದು ನಗರದಿಂದ ಕಾಲೇಜು ಸುಮಾರು ೧೦ ಕಿ.ಮೀ. ದೂರ ಇದೆ. ಆದರೆ ಕಾಲೇಜು ಆರಂಭದ ಸಮಯದೊಳಗೆ ಕೇವಲ ಮೂರು ಬಸ್ಸುಗಳು ಮಾತ್ರ ಸಂಚರಿಸುತ್ತವೆ. ಹೀಗಾಗಿ ಸಮಯಕ್ಕೆ ಸರಿಯಾಗಿ ತಲುಪಲು ಆಗುತ್ತಿಲ್ಲ. ಇನ್ನು ಕ್ಯಾಂಟೀನ್ ಸಮಸ್ಯೆಯಿಂದಾಗಿ ಅವಶ್ಯಕ ಸಂದರ್ಭದಲ್ಲಿ ತಿಂಡಿ ತಿನಿಸು ದೊರೆಯದೇ ಕಷ್ಟವಾಗುತ್ತಿದೆ ಎಂದರು.
ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗಕ್ಕೆ ೮ ಉಪನ್ಯಾಸಕರು ಇರಬೇಕಿದೆ. ಆದರೆ ಇರುವ ಓರ್ವ ಖಾಯಂ ಉಪನ್ಯಾಸಕರನ್ನೂ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ. ಪ್ರಸ್ತುತ ೭ ಅತಿಥಿ ಉಪನ್ಯಾಸಕರಿದ್ದು ೪ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಇವರೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳು ತೊಂದರೆಯನ್ನು ಎದುರಿಸುವಂತಾಗಿದೆ ಎಂದರು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ ವಿದ್ಯಾರ್ಥಿಗಳು ತಮ್ಮ ಬೇಡಿಕೆಯ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರ ಪಾಲಕರು ಇದ್ದರು.