ಕಾರವಾರ: ಕ್ಷೇತ್ರದಲ್ಲಿ ವಿವಿಧ ಕಾಮಗಾರಿ ನಡೆಸಲು ಪ್ಯಾಕೇಜ್ ಟೆಂಡರ್ ರದ್ದು ಮಾಡದಿದ್ದರೆ ಶಾಸಕರ ಕಚೇರಿ ಬಳಿಕ ಸರಣ ಧರಣಿ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಎಚ್ಚರಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಯಾಕೇಜ್ ಟೆಂಡರ್ ರದ್ದುಪಡಿಸಲು 15 ದಿನ ಗುಡುವು ನೀಡುತ್ತೇವೆ. ಈ ಅವಧಿಯೊಳಗೆ ಕ್ರಮಕೈಗೊಳ್ಳದೇ ಇದ್ದರೆ ಧರಣಿ ನಡೆಸಲಾಗುವುದು ಎಂದರು. ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಕೊಡಬೇಕು ಎನ್ನುವುದನ್ನು ತಪ್ಪಿಸುವ ಉದ್ದೇಶದಿಂದ ಮೂಲಭೂತ ಸೌಲಭ್ಯಗಳನ್ನು ಹೊಂದಿರದ ಕೆಆರ್ಡಿಐಎಲ್ಗೆ ಕಾಮಗಾರಿಗಳನ್ನು ನೀಡಲಾಗುತ್ತದೆ. ನಾನು ಮಾಹಿತಿ ಹಕ್ಕಿನಡಿ ಪಡೆದುಕೊಂಡ ಮಾಹಿತಿಯಲ್ಲಿ ಕೆಆರ್ಡಿಐಲ್ನಲ್ಲಿ ಸಿಬ್ಬಂದಿ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ. ಅಂತವರಿಗೆ ಕೆಲಸಕೊಡುವುದರಿಂದ ಏನು ಪ್ರಯೋಜನ ಎಂದರು.
ಹಿಂದೆ ಕೆಲವು ಕಾಮಗಾರಿಗಳನ್ನು ಪ್ಯಾಕೇಜ ಮಾಡಿ ಟೆಂಡರ್ ಕರೆಯಲಾಗಿತ್ತು. ಅದನ್ನು ವಿರೋಧಿ ಸರ್ಕಾರದ ಗಮನಕ್ಕೆ ತಂದಾಗ ಪ್ಯಾಕೇಜ್ ರದ್ದು ಪಡಿಸಲಾಗಿತ್ತು. ಸ್ಥಳೀಯ ಗುತ್ತಿಗೆದಾರರಿಗೆ ಸೆಡ್ಡು ಹೊಡೆಯುವಂತೆ ಭಟ್ಕಳ ಮತ್ತು ಅಂಕೋಲಾದ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗುತ್ತಿದೆ ಎಂದರು. ಕೆಆರ್ಡಿಐಎಲ್ ನೀಡುವ ಕಾಮಗಾರಿಗಳನ್ನು ಪ್ರತ್ಯೇಕ ಟೆಂಡರ್ ಮಾಡಿ ಸ್ಥಳೀಯ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಿ ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದರು.
ಕಾಮಗಾರಿ ಪ್ಯಾಕೇಜ್ ಮಾಡುವುದರಿಂದ ದೊಡ್ಡ ಗುತ್ತಿಗೆದಾರರಿಗೆ ಅನುಕೂಲವಾಗಲಿದೆ. ಇದೂ ಅಲ್ಲದೇ ಕಾಮಗಾರಿಗಳನ್ನು ವ್ಯಕ್ತಿಗೇ ನೀಡಬೇಕು ಎನ್ನುವುದು ಟೆಂಡರ್ ಕರೆಯುವ ಮೊದಲೇ ಫಿಕ್ಸ್ ಆಗಿರುತ್ತದೆ. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ತೊಂದರೆ ಆಗುತ್ತಿದೆ ಎಂದು ಅವರು ದೂರಿದರು. ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವುದರಿಂದ ಸ್ಥಳೀಯ ಗುತ್ತಿಗೆದಾರರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೆ, ನಮ್ಮ ಯಾವುದೇ ಮನವಿಗೆ ಸ್ಪಂದಿಸುತ್ತಿಲ್ಲ. ನಮ್ಮ ಸಮಸ್ಯೆ ಹೇಳಿಕೊಳ್ಳಲು ಶಾಸಕರ ಬಳಿ ಅನೇಕ ಬಾರಿ ಸಮಯಾವಕಾಶ ಕೇಳಿದ್ದೇವೆ ಆದರೆ, ಅವರು ಇವತ್ತಿನವರೆಗೂ ನಮಗೆ ಸಮಯಾವಕಾಶ ನೀಡಿಲ್ಲ ಎಂದರು.
ಮೂರು ಲಕ್ಷಕ್ಕೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಬಾರದು ಎನ್ನುವುದು ನಿಯಮದಲ್ಲೇ ಇದೆ. ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಲಾಗುತ್ತಿದೆ ಎಂದು ನಾಯಕ ತಿಳಿಸಿದರು. ತಮಗಿಷ್ಟ ಬಂದವರಿಗೆ ಗುತ್ತಿಗೆ ನೀಡಬೇಕು ಎನ್ನುವ ದೃಷ್ಟಿಯಿಂದ ಟೆಂಡರ್ ಅರ್ಜಿಯಲ್ಲಿ ಮೂರು ಕೋಟಿ ಮೊತ್ತದ ಯಂತ್ರೋಪಕರಣಗಳು ಇರಬೇಕು ಎನ್ನುವುದು ಸೇರಿದಂತೆ ನಾನಾ ರೀತಿಯ ಷರತ್ತುಗಳನ್ನು ಹಾಕಲಾಗಿರುತ್ತದೆ ಎಂದು ಅವರು ಹೇಳಿದರು.