ಮಂಜೇಶ್ವರ: ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿಯೇ ಆಚರಿಸಿಕೊಳ್ಳಬೇಕೆಂಬ ಬಾಲಕನೋರ್ವನ ಮಹದಾಸೆಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸರು ಈಡೇರಿಸಿದ್ದಾರೆ.
ವರ್ಕಾಡಿಯ ಅಝೀಝ್ ಕಲ್ಲೂರು – ಆರಿಫಾ ದಂಪತಿಯ ಪುತ್ರ , ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಆಶೀಲ್ ಆಗಸ್ಟ್ 6 ರಂದು ಶನಿವಾರ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೇಕ್ ತುಂಡರಿಸಿ, ಸಿಹಿತಿಂಡಿ ಹಂಚಿ ಆಚರಿಸಿದನು. ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂದು ಆಶೀಲ್ ನು ತಂದೆತಾಯಿ ಬಳಿ ಪಟ್ಟು ಹಿಡಿದಿದ್ಜೇ, ತಂದೆ ಅಝೀಜ್ ಕಲ್ಲೂರುರವರು ಮಂಜೇಶ್ವರ ಠಾಣೆಯ ಪೊಲೀಸರನ್ನು ಸಂಪರ್ಕಿಸಿದರು.
ಆಶೀಲ್ ನ ಮಹದಾಸೆಯಂತೆ ಮಂಜೇಶ್ವರ ಠಾಣೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಲು ಮಂಜೇಶ್ವರ ಪೊಲೀಸರು ಅವಕಾಶ ಮಾಡಿಕೊ ಟ್ಟಿದ್ದು. ಮಂಜೇಶ್ವರ ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್, ಎಸ್ ಐ ಟೋನಿ, ಅನ್ಸಾರ್ ಸಹಿತ ಠಾಣೆಯ ಪೊಲೀಸರು ಆಶೀಲ್ ನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಶುಭಹಾರೈಸಿದರು