ಕಾರವಾರ: ಅಂಕೋಲಾದ ಭಾವಿಕೇರಿಯ ರಾಘವೇಂದ್ರ ಭಟ್ ಇವರು ತಮ್ಮ ಮನೆಯಲ್ಲಿ ಸಾಕಿದ ವಿಶಿಷ್ಠ ತಳಿಯ 17 ನಾಯಿಮರಿಗಳು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದು ಅವುಗಳನ್ನು ದೇಶಸೇವೆಗೆ ಬೀಳ್ಕೊಡಲಾಯಿತು.
ಇಂಡಿಯನ್ ಆರ್ಮಿಯ ಕಮಾಂಡರ ಹಾಗೂ ಜವಾನರೇ ಖುದ್ದಾಗಿ ಬಂದು 17 ನಾಯಿ ಮರಿಗಳನ್ನು ಆಸ್ಸಾಂಗೆ ಒಯ್ದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿ ಭಾವಿಕೇರಿಯ ರಾಘವೇಂದ್ರ ಭಟ್ ಇವರಿಗೆ ವಿವಿಧ ತಳಿಯ ನಾಯಿಗಳನ್ನು ಸಾಕುವ ಹವ್ಯಾಸ. ಡಾಬರಮನ್, ಪಿಟ್ ಬುಲ್, ಜರ್ಮನ್ ಶೆಫರ್ಡ್, ಅಮೇರಿಕನ್ ಬುಲ್ಲಿ, ಮುಧೋಳ್, ಪಾಕಿಸ್ತಾನ್ ಬುಲ್ಲಿ, ಬಾಕ್ಸರ್, ಪಗ್, ಗ್ರೇಟ್ ಡೇನ್, ಲಾಬ್ರಡಾರ್ ಹಾಗೂ ಬೆಲ್ಜಿಯಂ ಮೆಲಿನೋಯ್ಸ್ ಮುಂತಾದ ನಾಯಿಗಳನ್ನು ಇವರು ಸಾಕಿದ್ದಾರೆ. ಪ್ರಸ್ತುತ ಬೆಲ್ಜಿಯಂ ಮೆನೋಲಿನ್ಸ್ ತಳಿಯ ನಾಯಿ ಮರಿಗಳೇ ಈಗ ದೇಶಸೇವೆಗಾಗಿ ಹೊರಟಿವೆ. ಇವರು ಈ ಹಿಂದೆ ಸಾಕಿದ್ದ ಬೆಲ್ಜಿಯಂ ಮೆಲಿನೋಯ್ಸ್ ತಳಿಯ ನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಕಾರ್ಕಳದ ಎಎನ್ಫ್, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲೂ ಕಾರ್ಯನಿರ್ವಹಿಸುತ್ತಿವೆ. ಇವರು ನಾಯಿಗಳನ್ನು ಪೊಲೀಸ್ ಇಲಾಖೆಗೆ ನೀಡಿದ್ದ ಇವರ ಪೇಸಬುಕ್ ಪೋಸ್ಟನ್ನು ವೀಕ್ಷಿಸಿದ ಭಾರತೀಯ ಸೈನ್ಯದ ಅಧಿಕಾರಿಗಳು ರಾಘವೇಂದ್ರ ಭಟ್ ಅವರನ್ನು ಸಂಪರ್ಕಿಸಿದ್ದಲ್ಲದೆ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಹಾಗೂ ಸೈನ್ಯದ ಉನ್ನತಾಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದರು.
ಅಧಿಕಾರಿಗಳ ನಿರ್ದೇಶನದ ಪ್ರಕಾರ ರಾಘವೇಂದ್ರ ಭಟ್ ಅವರ ಮನೆಗೆ ಆಗಮಿಸಿದ ಭಾರತೀಯ ಸೈನ್ಯದ ತಂಡ ಸ್ವತಃ ಬಂದು ನಾಯಿಮರಿಗಳನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಈ ನಾಯಿಗಳು ರೂ. 80 ಸಾವಿರದಿಂದ ರೂ. 2 ಲಕ್ಷದವರೆಗೂ ಬೆಲೆಬಾಳುತ್ತವೆ. ಕರಾರುವಾಕ್ ಗುರಿ ಮತ್ತು ದಕ್ಷತೆಗೆ ಉತ್ತಮ ತಳಿ ಇದಾಗಿದೆ. ಇದಕ್ಕೂ ಮೊದಲು ಸೇನೆಯ ಓರ್ವ ಜವಾನ 45 ದಿನ ಇವರ ಮನೆಯಲ್ಲೇ ಇದ್ದು ನಾಯಿಗಳ ವರ್ತನೆ, ದಿನನಿತ್ಯದ ಆಹಾರ ಇವುಗಳ ಬಗ್ಗೆ ತಿಳಿದುಕೊಂಡು ಅಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದರು. ಗುರುವಾರ ಅಂಕೋಲೆಗೆ ಆಗಮಿಸಿದ ತಂಡ ರಾಘವೇಂದ್ರ ಭಟ್ ದಂಪತಿ ಸಾಕಿದ್ದ ಈ ನಾಯಿ ಮರಿಗಳನ್ನು ಖಾಸಗಿ ಏರಕಂಡೀಶನ್ ಬಸ್ ಮೂಲಕ ಆಸ್ಸಾಂಗೆ ಕೊಂಡೊಯ್ದಿದೆ. ತಾವು ಸಾಕಿದ ನಾಯಿ ಮರಿಗಳು ದೇಶಸೇವೆಗೆ ಹೋಗುತ್ತಿರುವದನ್ನು ಕಂಡು ರಾಘವೇಂದ್ರ ಭಟ್ ಅವರ ಪತ್ನಿ ರಾಜೇಶ್ವರಿ ಮತ್ತು ಅವರ ಕುಟುಂಬ ಸಂತಸ ವ್ಯಕ್ತಪಡಿಸಿದೆ.