News Karnataka Kannada
Sunday, April 28 2024
ಸಮುದಾಯ

ಮೈಸೂರು: ಚಾಮುಂಡಿಬೆಟ್ಟದಲ್ಲಿ ಆಷಾಢ ಸಂಭ್ರಮ

Mysuru: Ashadha celebrations at Chamundi Hill
Photo Credit : By Author

ಮೈಸೂರು: ಆಷಾಢಕ್ಕೆ ಚಾಮುಂಡಿಬೆಟ್ಟ ಸಜ್ಜಾಗಿದೆ.. ನಿಸರ್ಗವೇ ಹೇಳುವಂತೆ ಗಿಡಮರಗಳೆಲ್ಲವೂ ಚಿಗುರಿ ಹಸಿರಿನಿಂದ ಕಂಗೊಳಿಸುತ್ತಾ ಆಷಾಢದ ಕುಳಿರ್ ಗಾಳಿಯಲ್ಲಿ ತೇಲಾಡಲು, ಮಂಜಿನ ತೆರೆಯಲ್ಲಿ ಮೈಮರೆಯಲು ಕೈ ಬೀಸಿ ಕರೆಯುವಂತೆ ಭಾಸವಾಗುತ್ತದೆ.

ಆಷಾಢವೇ ಹಾಗೆ.. ಮೋಡ ಮುಸುಕಿದ ವಾತಾವರಣದಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಜಿಟಿಜಿಟಿ ಮಳೆಯಲ್ಲಿ ಬೀಸುವ ತಂಗಾಳಿಯಲ್ಲಿ ಮಿಂದೇಳುವುದೇ ಒಂದು ಸುಂದರ ಅನುಭವ. ಅದರಲ್ಲೂ ಈ ದಿನಗಳಲ್ಲಿ ಅದರಲ್ಲೂ ಮುಂಜಾನೆ ಚಾಮುಂಡಿಬೆಟ್ಟಕ್ಕೆ ತೆರಳಿದರೆ ಅದರ ಅನುಭವ ವರ್ಣಿಸಲಾಗದ್ದು.. ಬೆಟ್ಟದ ನಳನಳಿಸುವ ಸುಂದರ ನೋಟ ನಿಸರ್ಗ ಪ್ರೇಮಿಗಳನ್ನು ದೂರದಿಂದಲೇ ಕೈಬೀಸಿ ಕರೆಯುತ್ತಿದೆ. ಆಗೊಮ್ಮೆ ಈಗೊಮ್ಮೆ ಇಡೀ ಬೆಟ್ಟವನ್ನೇ ಆವರಿಸುವ ಮಂಜು ಕುಳಿರ್ ಗಾಳಿಯಲ್ಲಿ ತೇಲಿಹೋಗುವ ದೃಶ್ಯಗಳು ಮೈಮನವನ್ನು ಪುಳಕಗೊಳಿಸುತ್ತವೆ.

ಆಷಾಢದ ವೇಳೆ ಇಡೀ ಬೆಟ್ಟ ಹಸಿರ ಸೀರೆಯುಟ್ಟು ನಿಂತ ಷೋಡಷಿಯಂತೆ ಕಾಣಿಸುತ್ತದೆ. ಆಷಾಢ ತಿಂಗಳ ಪೂರ್ತಿ ಭಕ್ತರು, ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಬರುತ್ತಾರೆಯಾದರೂ ಶುಕ್ರವಾರದಂದು ಮಾತ್ರ ಜನಜಾತ್ರೆಯೇ ನೆರೆಯುತ್ತದೆ. ವಾಹನಗಳ ಮೂಲಕ ನೇರವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವವರು ಒಂದು ಕಡೆಯಾದರೆ ಮತ್ತೊಂದು ಕಡೆ ಚಾಮುಂಡಿಬೆಟ್ಟದ ಮೂಲಕ ಮೆಟ್ಟಿಲುಗಳನ್ನು ಏರಿ ಚಾಮುಂಡಿಬೆಟ್ಟವನ್ನು ತಲುಪುತ್ತಾರೆ. ಹಿಂದಿನಿಂದಲೂ ಸಾವಿರ ಮೆಟ್ಟಿಲೇರಿ ಚಾಮುಂಡಿತಾಯಿಯನ್ನು ದರ್ಶನ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಈ ಬಾರಿ,ಜೂ.23, 30, ಜು.7 ಹಾಗೂ ಜು.14ರಂದು ಆಷಾಢ ಶುಕ್ರವಾರ ಬರಲಿದ್ದು, ಜು.10ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ನಡೆಯಲಿದೆ. ಹೀಗಾಗಿ ಚಾಮುಂಡಿಬೆಟ್ಟದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ಆಷಾಢ ಶುಕ್ರವಾರ ಹಾಗೂ ವರ್ಧಂತಿಯ ದಿನಗಳಂದು ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ವಿಶೇಷ ಅಲಂಕಾರ ಮಾಡಲಾಗುತ್ತದೆ. ಆಷಾಢ ಮಾಸದಲ್ಲಿ ಶಕ್ತಿ ದೇವತೆಯ ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ ಎಂದು ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಹೇಳಿದ್ದಾರೆ.

ಈಗಾಗಲೇ ಪಾದದಿಂದ ಚಾಮುಂಡಿಬೆಟ್ಟದವರೆಗೆ ಮೆಟ್ಟಿಲುಗಳ ಎರಡು ಬದಿಯಲ್ಲಿ ಬೆಳೆದ ಕಾಡುಗಳನ್ನು ಕಡಿದು, ಭಕ್ತರಿಗೆ ಮೆಟ್ಟಿಲು ಹತ್ತಲು ಸುಗಮ ಮಾಡಿಕೊಡಲಾಗುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸುವುದರಿಂದ ಪ್ಲಾಸ್ಟಿಕ್ ಮುಕ್ತಗೊಳಿಸಿ ಸ್ವಚ್ಛತೆ ಕಾಪಾಡುವುದು ಬಹುಮುಖ್ಯವಾಗಿದೆ. ಹೀಗಾಗಿ ಮೈಸೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್ ಅವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದಾರೆ.

ಬೆಟ್ಟದ ಪಾದದಿಂದ ದೇವಾಲಯದವರೆಗೂ ಮೆಟ್ಟಿಲುಗಳನ್ನು ಗುಡಿಸಿ, ಮುಳ್ಳಿನ ಗಿಡ ತೆರವುಗೊಳಿಸಿ, ಮಾರ್ಗ ಮಧ್ಯೆದಲ್ಲಿ ಬಿಸಾಡಿದ್ದ ನೀರಿನ ಬಾಟಲ್, ಪ್ಲಾಸ್ಟಿಕ್ ಪೇಪರ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತ ವಿಲೇವಾರಿ ಮಾಡಲಾಗಿದೆ. ಇದರಿಂದ ಮೆಟ್ಟಿಲು ಮೂಲಕ ಸಾಗುವ ಭಕ್ತರಿಗೆ ಅನುಕೂಲವಾಗಲಿದೆ.

ಇನ್ನೊಂದೆಡೆ ಚಾಮುಂಡಿಬೆಟ್ಟದಲ್ಲಿ ಆಷಾಢದ ಶುಕ್ರವಾರದಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಅವರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಮಾಡುವ ಕಾರ್ಯಗಳು ಆರಂಭವಾಗಿವೆ. ಒಟ್ಟಾರೆ ಆಷಾಢಕ್ಕೆ ಚಾಮುಂಡಿಬೆಟ್ಟ ಸರ್ವ ರೀತಿಯಲ್ಲೂ ಸಜ್ಜಾಗುತ್ತಿರುವುದಂತು ನಿಜ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು