ಗೋಕರ್ಣ: ಗೋ ಆಧರಿತ ಕೃಷಿ ವ್ಯವಸ್ಥೆಯ ಪುನಶ್ಚೇತನಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಈಗಾಗಲೇ ಸಾರ ಕಳೆದಕೊಂಡಿರುವ ಮಣ್ಣಿನ ಪುನರುಜ್ಜೀವನದ ಮೂಲಕ ಸುಸ್ಥಿರ ಮಣ್ಣು ಆರೋಗ್ಯ ಕಾಪಾಡಲು ಅಗತ್ಯ ಕಾರ್ಯಯೋಜನೆ ರೂಪಿಸಬೇಕು ಎಂದು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಸಂಶೋಧನಾ ಮುಖ್ಯಸ್ಥರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಸದೃಢ ಭವಿಷ್ಯಕ್ಕಾಗಿ ಸುಸ್ಥಿರ ಮಣ್ಣು; ಮಣ್ಣಿನ ಆರೋಗ್ಯಕ್ಕಾಗಿ ಮನೆಗೊಂದು ಗೋವು” ಎಂಬ ಚಿಂತನ- ಮಂಥನ ಗೋಷ್ಠಿಯಲ್ಲಿ ಸಭೆ ಸೇರಿದ್ದ ರಾಜ್ಯದ ಐದು ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಸಂಶೋಧನಾ ಮುಖ್ಯಸ್ಥರು ಸರ್ಕಾರಕ್ಕೆ ಈ ಶಿಫಾರಸ್ಸು ಮಾಡಿದ್ದಾರೆ.
ಚಿಪ್ಕೊ ಮಾದರಿಯಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮಹತ್ವ ನೀಡಬೇಕು, ವಿವೇಚನಾರಹಿತವಾಗಿ ರಾಸಾಯನಿಕಗಳು ಮತ್ತು ಕೀಟನಾಶಕಗಳ ಬಳಕೆಯನ್ನು ತಡೆಯಬೇಕು ಮತ್ತು ಇದರ ಆರೋಗ್ಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದೂ ಸಲಹೆ ಮಾಡಿದೆ.
ರಸಗೊಬ್ಬರಗಳಿಗೆ ನೀಡುತ್ತಿರುವ ದೊಡ್ಡ ಮೊತ್ತದ ಸಬ್ಸಿಡಿ ಪೈಕಿ ಒಂದು ಭಾಗವನ್ನು ಜೈವಿಕ ಕೃಷಿಗೆ ಮೀಸಲಿಡಬೇಕು. ರಸಗೊಬ್ಬರ ಹಾಗೂ ಕೀಟನಾಶಗಳ ಬಳಕೆ ನಿರ್ಬಂಧಕ್ಕೆ ಸೂಕ್ತ ನಿಯಂತ್ರಣಾ ವ್ಯವಸ್ಥೆ ರೂಪಿಸಬೇಕು, ಮಾರುಕಟ್ಟೆಯಲ್ಲಿ ಲಭ್ಯವಿರುವ ಜೈವಿಕ ಉತ್ಪನ್ನಗಳ ಗುಣಮಟ್ಟ ಖಾತರಿಗೆ ವ್ಯವಸ್ಥೆ ಮಾಡಬೇಕು, ಗೋ ಆಧರಿತ ಸಮಗ್ರ ಕೃಷಿ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಜ್ಞರು ಸಲಹೆ ಮಾಡಿದರು.
ಸರ್ಕಾರ, ಧಾರ್ಮಿಕ ಕೇಂದ್ರಗಳು ಮತ್ತು ವಿಶ್ವವಿದ್ಯಾನಿಲಯಗಳು ಸಹಭಾಗಿತ್ವದಲ್ಲಿ ಸುಧಾರಿತ ತಂತ್ರಜ್ಞಾನಗಳ ಪ್ರಸರಣಕ್ಕೆ ಕ್ರಮ ಕೈಗೊಳ್ಳಬೇಕು. ಸಾಂಪ್ರದಾಯಿಕ ಕೃಷಿ ಮತ್ತು ಅದರ ವೈಜ್ಞಾನಿಕ ದಋಢೀಕರಣಕ್ಕೆ ಒತ್ತು ನೀಡಬೇಕು ಎಂದು ಶಿಫಾರಸ್ಸಿನಲ್ಲಿ ಆಗ್ರಹಿಸಲಾಗಿದೆ.
ಸಾನ್ನಿಧ್ಯ ವಹಿಸಿದ್ದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಸ್ವಾಮೀಜಿ ಗೋ ಅಭಿಯಾನ ದೇಶದಲ್ಲಿ ಜನಜಾಗೃತಿ ಉಂಟಾಗಿದೆ. ಆದರೆ ಗೋಶಾಲೆಗಳು ವೃದ್ಧಾಶ್ರಮಗಳಿದ್ದಂತೆ. ಪ್ರತಿ ರೈತರ ಮನೆಗಳಲ್ಲಿ ಗೋವು ಸಾಗುವಂತಾದಾಗಬೇಕು. ಒಬ್ಬನಿಗೆ ಒಂದು ಗೋವು ಎನ್ನುವುದು ಗೋ ಅಭಿಯಾನದ ತಾತ್ವಿಕ ಅಂತ್ಯ ಎಂದು ಬಣ್ಣಿಸಿದರು. ಗೋವು ಸಾಕುವ ಸಾಮಥ್ರ್ಯ ಮತ್ತು ಆಸಕ್ತಿ ಇರುವವರಿಗೆ ಶ್ರೀಮಠದಿಂದಲೇ ಗೋವನ್ನು ನೀಡಿ ಸಾಕಲು ಉತ್ತೇಜನ ನೀಡಲಾಗುವುದು. ಶ್ರೀಮಠದಿಂದ ಆಶೀರ್ವಾದಪೂರ್ವಕವಾಗಿ ಮನೆಗೊಂದು ಗೋವು ನೀಡುವುದು ಮಣ್ಣಿಗೊಂದು ಸಣ್ಣಸೇವೆ ಎಂದು ಬಣ್ಣಿಸಿದರು.
“ಮಣ್ಣಿನ ಅರಿವಿನ ಮೂಲಕ ಪರಂಪರಾ ಗುರುಕುಲಕ್ಕೆ ಜ್ಞಾನ ತುಂಬುವ ಕಾರ್ಯ ನಡೆಯುತ್ತಿದೆ. ಮಣ್ಣು ಸರ್ವಮೂಲ. ಅದನ್ನು ಚೆನ್ನಾಗಿಟ್ಟುಕೊಳ್ಳದಿದ್ದರೆ ಮುಂದಿನ ಯಾವುದೂ ಚೆನ್ನಾಗಿರಲು ಸಾಧ್ಯವಿಲ್ಲ. ಮಾತೆ, ಭೂಮಾತೆ, ಗೋಮಾತೆ ನಮ್ಮ ಬದುಕಿನಲ್ಲಿ ಅನಿವಾರ್ಯ. ಈ ಮೂರು ಬಿಂದುಗಳ ನಡುವೆ ಅನ್ಯೋನ್ಯ ಸಂಬಂಧ ಇದೆ. ಈ ಮೂರು ಬಿಂದುಗಳನ್ನು ಜೋಡಿಸಿದಾಗ ಸುರಕ್ಷಿತ ತ್ರಿಕೋನ ನಿರ್ಮಾಣವಾಗುತ್ತದೆ. ಅದು ದೇಶಕ್ಕೆ, ವಿಶ್ವಕ್ಕೆ ಅನಿವಾರ್ಯ. ಭೂಮಿಗೆ ವಿಷ ನೀಡಿದರೆ ವಿಷವೇ ಬೆಳೆಯುತ್ತದೆ; ಅಮೃತ ನೀಡಿದರೆ ಅಮೃತ ಬರುತ್ತದೆ” ಎಂದು ವಿಶ್ಲೇಷಿಸಿದರು.
ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಸಂಶೋಧನಾ ಮುಖ್ಯಸ್ಥರು ಇಲ್ಲಿ ಸೇರಿ ಮಣ್ಣಿನ ವಿಜ್ಞಾನದ ಬಗ್ಗೆ ಚರ್ಚಿಸಿರುವುದು ಅತ್ಯಂತ ಅರ್ಥಪೂರ್ಣ ಎಂದರು. ಜೀವಚೈತನ್ಯ ಭೂಮಿಯಲ್ಲಿದೆ. ಇದನ್ನು ಹಾಳು ಮಾಡುವಷ್ಟು ದೊಡ್ಡ ಅಪಚಾರ ಬೇರಾವುದೂ ಇಲ್ಲ ಎಂದು ಹೇಳಿದರು.
ಬೆಂಗಳೂರು ಕೃಷಿ ವಿವಿ ಕುಪತಿ ಡಾ.ಎಸ್.ವಿ.ಸುರೇಶ್, ಜಿಕೆವಿಕೆ ಆರ್ ಐಓಎಫ್ ಡಾ.ಬೋರಯ್ಯ ಬಿ, ಧಾರವಡ ಕೃಷಿ ವಿವಿ ಡೀನ್ ಡಾ.ಎಚ್.ಬಿ.ಬಬಲಾದ, ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊಫೆಸರ್ ಡಾ.ರಮೇಶ್ ಭಟ್, ಡಾ.ಮಂಜುನಾಥ ಹೆಬ್ಬಾರ್, ರಾಯಚೂರು ಕೃಷಿ ವಿಜ್ಞಾನ ವಿವಿಯ ಪ್ರೊಫೆಸರ್ ಡಾ.ವೈ.ಎಸ್.ಅಮರೇಶ್, ಡಾ.ಆನಂದ್ ಕಾಂಬ್ಳೆ, ಶಿವಮೊಗ್ಗ ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ, ಜೈವಿಕ ಕೃಷಿ ವಿಭಾಗದ ಮುಖ್ಯಸ್ಥ ಡಾ.ಎಸ್.ಪ್ರದೀಪ್, ಬಾಗಲಕೋಟೆ ತೋಟಗಾರಿಕೆ ವಿವಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಎಚ್.ಪಿ.ಮಹೇಶ್ವರಪ್ಪ, ಡಾ.ಸುಧೀಶ ಕುಲಕರ್ಣಿ, ಡಾ.ಶಿವಾನಂದ ಹೊಂಗಲ್, ಡಾ.ಕಿರಣ್ ನಾಗಜ್ಜವರ್, ಎನ್ಡಿಆರ್ಐ ನಿದೇರ್ಶಕ ಡಾ.ಕೆ.ಪಿ.ರಮೇಶ್, ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ನಾಗರತ್ನ ಬಿರಾದಾರ್, ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ವಿ.ಐ.ಬೆಣಗಿ ಮತ್ತಿತರರು ಚರ್ಚಾಕೂಟದಲ್ಲಿ ಭಾಗವಹಿಸಿದ್ದರು. ಜತೆಗೆ ಹಲವು ಮಂದಿ ಪ್ರಗತಿಪರ ರೈತರು ಸಲಹೆ ಸೂಚನೆಗಳನ್ನು ನೀಡಿದರು. ಶ್ರೀಮಠದ ಸಂಶೋಧನಾ ಖಂಡದ ಶ್ರೀಸಂಯೋಜಕ ಡಾ.ಗುರುರಾಜ್ ಪಡೀಲ್ ಉಪಸ್ಥಿತರಿದ್ದರು.
ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಮೃತ್ತಿಕಾ ಸೂಕ್ತ ಪಠಿಸಿದರು. ಸಂಶೋಧನಾ ಖಂಡದ ಸಂಯೋಜಕ ಅರವಿಂದ ಲಾಡ ಸ್ವಾಗತಿಸಿದರು. ವಿವಿವಿ ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ಗೋರಕ್ಷಣಾ ಕಾರ್ಯಗಳ ಬಗ್ಗೆ ಕಾಮದುಘಾ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ ಮಾತನಾಡಿದರು.