ಕಾರವಾರ: ದೇಶದಲ್ಲಿ ಮತೀಯ ಗಲಭೆಗಳನ್ನು ಸೃಷ್ಟಿಸಿ ಅಧಿಕಾರ ನಡೆಸಿರುವ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಪರವಾದ ನಿಲುವು ವ್ಯಕ್ತಪಡಿಸುವುದರ ಮೂಲಕ ಕಾಂಗ್ರೆಸ್ ಪಕ್ಷ ಪರೋಕ್ಷವಾಗಿ ಭಯೋತ್ಪಾದನೆಗೆ ಬೆಂಗಾವಲಾಗಿದೆ ಎಂಬುದನ್ನು ಸಾಕ್ಷೀಕರಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ನಗರದ ಮಾಲಾದೇವಿ ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪಿಎಫ್ಐ ಅನ್ನು ಕೇಂದ್ರ ನಿಷೇಧ ಮಾಡಿದೆ. ಆ ನಿಷೇಧವನ್ನೇ ಕಾಂಗ್ರೆಸ್ನವರು ಪ್ರಶ್ನಿಸುತ್ತಿದ್ದಾರೆ. ಮೈಸೂರಿನಲ್ಲಿ ಇವರದ್ದೇ ಶಾಸಕರ ಮೇಲೆ ಚೂರಿ ಇರಿತ ಪ್ರಕರಣ ನಡೆಯಿತು ಎಂದು ಆರೋಪಿಸಿದರು.
ಕಾಂಗ್ರೆಸ್ನ ತುಷ್ಠಿಕರಣ ನೀತಿಯಿಂದಾಗಿಯೇ ಮತೀಯ ಗಲಭೆಗಳು ಜಾಸ್ತಿಯಾಯಿತು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಲ್ಲಿ ಕಾಂಗ್ರೆಸ್ಸಿಗರು ಆಡಳಿತ ನಡೆಸಿದರು. ಜೈಲಲ್ಲಿರಬೇಕಾದ ೨೦೦೦ ಜನರನ್ನು ಬಿಡುಗಡೆ ಮಾಡಿರುವುದೇ ಇದಕ್ಕೊಂದು ಉತ್ತಮ ಉದಾಹರಣೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅತಿಹೆಚ್ಚು ಹಿಂದೂ ಯುವಕರ ಕೊಲೆ ಆಗಿದೆ. ಯಾರ ಮನೆಗೂ ಅವರು ಹೋಗಲಿಲ್ಲ. ಯಾರನ್ನೂ ಬಂಧನ ಮಾಡಲಿಲ್ಲ. ಅದೇ ವೇಳೆಯಲ್ಲಿ ಶೃಂಗೇರಿಯಲ್ಲಿ ಒಬ್ಬ ಗೋಹಂತಕನ ಎನ್ಕೌಂಟರ್ ಆಯಿತು. ಆತನ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ನೀಡುವ ಮೂಲಕ ಜನರ ಭಾವನೆಯನ್ನು ಕೆರಳಿಸುವ ಮೂಲಕ ಮತೀಯ ಗಲಭೆಗೆ ದಾರಿಮಾಡಿ ರಕ್ತಸಿಕ್ತವಾದ ಆಡಳಿತವನ್ನು ಸಿದ್ದರಾಮಯ್ಯ ನಡೆಸಿದರು ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ೨೦ಕ್ಕೂ ಹೆಚ್ಚು ಸೀಟು ಬರುವುದಿಲ್ಲ ಎನ್ನುವುದು ಜೆಡಿಎಸ್ಗೆ ಮನದಟ್ಟಾಗಿದೆ. ಇದು ಸಮೀಕ್ಷೆಗಳಲ್ಲೂ ಬಹಿರಂಗವಾಗಿದೆ. ಇದರಿಂದ ಮಾನಸಿಕ ಚಂಚಲತೆಗೆ ಒಳಗಾಗಿರುವ ಕುಮಾರಸ್ವಾಮಿ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮೂರು ಜಿಲ್ಲೆಯ ಪ್ರಭಾವ ಬಳಿಸಿಕೊಂಡು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಕಳೆದ ಬಾರಿ ಯಾರ್ ಯಾರದ್ದೋ ಆಶ್ರಯದಲ್ಲಿ ಬದುಕಿದ್ದಾರೆ. ಈ ಬಾರಿ ಅವರದ್ದು ೨೦ ಸ್ಥಾನ ದಾಟುವುದಿಲ್ಲ ಎಂದು ಭವಿಷ್ಯ ನುಡಿದರು.
ಕುಮಾರಸ್ವಾಮಿ ಅವರು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಸಮುದಾಯವನ್ನು ಕೆರಳಿರುವ ಹೇಳಿಕೆಗಳನ್ನು ನೀಡಬಾರದು ಎಂದರು.