ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ ಅಸೋಸಿಯೇಶನ್ ಆಶ್ರಯದಲ್ಲಿ ಫೆ.12ರಂದು 5ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ ನಡೆಯಲಿದೆ ಎಂದು ಮಾಹೆ ಮಣಿಪಾಲ ಇದರ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮ್ಯಾರಥಾನ್ ನಲ್ಲಿ ಮಕ್ಕಳಲ್ಲಿ ಉಂಟಾಗುವ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಇದು ದೇಶದಲ್ಲೆ ವಿದ್ಯಾರ್ಥಿ ಸಂಘಟಿತ ಬಹುದೊಡ್ಡ ಮ್ಯಾರಥಾನ್ ಕೂಟ ಆಗಲಿದೆ. ಜಗತ್ತಿನ ಬೇರೆ ಬೇರೆ ದೇಶಗಳ, ಸಾವಿರಾರು ಓಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಐದು ವಿಭಾಗಗಳಲ್ಲಿ ಈ ಮ್ಯಾರಾಥಾನ್ ನಡೆಯಲಿದ್ದು, 42 ಕಿ.ಮೀ. ಪೂರ್ಣ ಮ್ಯಾರಾಥಾನ್, 21 ಕಿ.ಮೀ.ಗೆ ಹಾಫ್ ಮ್ಯಾರಥಾನ್, 10 ಕಿ.ಮೀ. ಓಟ, 5 ಕಿ.ಮೀ. ಓಟ- ಉಡುಪಿ ಜಿಲ್ಲಾ ಪೊಲೀಸ್ ಮಾದಕ ವ್ಯಸನ ವಿರುದ್ಧ ಅರಿವು ಓಟ ಹಾಗೂ 3 ಕಿ.ಮೀ.ಗೆ ರೋಟರಿಯ ಮನೋರಂಜನಾ ಓಟವನ್ನು ಒಳಗೊಂಡಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮ್ಯಾರಥಾನ್ ಸಂಘಟನಾ ಸಮಿತಿ ಅಧ್ಯಕ್ಷರು ಆಗಿರುವ ಶಾಸಕ ಕೆ. ರಘುಪತಿ ಭಟ್, ಉಡುಪಿ ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಡಾ. ಕೆಂಪರಾಜ್ ಎಚ್. ಬಿ., ಎನ್.ಇ.ಬಿ ಸ್ಪೋಟ್ಸ್ ನಿರ್ದೇಶಕ ನಾಗರಾಜ ಅಡಿಗ, ಮಾಹೆ ಮಣಿಪಾಲ ಇದ ಸ್ಪೋಟ್ಸ್ ಕೌನ್ಸಿಲ್ಕ್ರೀಡಾ ಕಾರ್ಯದರ್ಶಿ ಡಾ. ವಿನೋದ್ ನಾಯಕ್, ಉಡುಪಿ ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ದಿನೇಶ್ ಕುಮಾರ್ ಎ., ಸದಸ್ಯ ಲಚ್ಚೇಂದ್ರ, ಮಧು ದೀಕ್ಷಿತ್ ಉಪಸ್ಥಿತರಿದ್ದರು.