ಕಾರವಾರ: ರಾಜ್ಯದಲ್ಲಿ ಜನರನ್ನು ಲೂಟಿ ಮಾಡಲಾಗುತ್ತಿದೆ. ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರಕಾರ ಜನರಿಂದ ಲೂಟಿ ಮಾಡಿದೆ. ನಾವು ಭ್ರಷ್ಟಾಚಾರ, ಲೂಟಿ ನಡೆಸುತ್ತೇವೆ ಎಂದು ಬಿಜೆಪಿ ಮುಖಂಡರು ಬಹಿರಂಗವಾಗಿ ಹೇಳುತ್ತಾರೆ. ಬಿಜೆಪಿಯವರು ಲೂಟಿ ಮಾಡಿದ ಹಣದಿಂದ ಹಲವು ರಸ್ತೆ, ಶಿಕ್ಷಣ ಸಂಸ್ಥೆ, ಆರೋಗ್ಯ ಸಂಸ್ಥೆ ನಿರ್ಮಾಣ ಮಾಡಬಹುದಿತ್ತು ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ದಾಂಡೇಲಿಯಲ್ಲಿ ಎಲ್ಲಾ ಸಮುದಾಯದ ಜನರು ಒಗ್ಗಟ್ಟಾಗಿ ಬಾಳುತ್ತಿರುವುದು ಸಂತೋಷ. ಆದರೆ ಇಂದಿನ ರಾಜಕೀಯ ದಾರಿ ತಪ್ಪಿಸುವ ರಾಜಕೀಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಯಾವ ವಿಷಯ ತರಬೇಕೆಂದು ಬಿಜೆಪಿಯವರು ಕಾಯುತ್ತಿರುತ್ತಾರೆ. ಯಾರು ಜನರ ಅಭಿವೃದ್ಧಿಗಾಗಿ ಶ್ರಮ ವಹಿಸ್ತಾರೆ, ಯಾರು ತಮ್ಮ ಸ್ವಾರ್ಥಕ್ಕಾಗಿ ಮಾತನಾಡ್ತಾರೆ ಎಂಬುದು ಎಂದು ಜನರಿಗೆ ತಿಳಿದಿದೆ. ಕರ್ನಾಟಕದ ಜನರು ಆಡಳಿತ ಚುಕ್ಕಾಣಿ ನಮಗೆ ನೀಡಿ ಎಂದು ಬಿಜೆಪಿಯವರು ಹೇಳ್ತಾರೆ. ಕಳೆದ ಮೂರುವರೆ ವರ್ಷದಿಂದ ರಾಜ್ಯದಲ್ಲಿ ಯಾರ ಸರಕಾರವಿತ್ತು..? ಎಂದು ಪ್ರಶ್ನಿಸಿದರು.
ಇಂದು ಪ್ರತಿಯೊಂದು ವಸ್ತುಗಳ ಬೆಲೆ ಏರಿದ್ದು, ಆಹಾರ, ಶಿಕ್ಷಣ ಪ್ರತಿಯೊಂದರ ಬೆಲೆ ಗಗನಕ್ಕೇರಿದೆ. ಸರಕಾರದಲ್ಲಿ ಎರಡೂವರೆ ಲಕ್ಷ ಉದ್ಯೋಗಗಳು ಇಂದಿಗೂ ಖಾಲಿಯಿವೆ. ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ರೈತ ಬೆಳೆಗಳಿಗೂ ಜಿಎಸ್ಟಿ ಕಾಟ. ಎಲ್ಲಿಯೂ ಉತ್ತಮ ಆಸ್ಪತ್ರೆಗಳನ್ನು ಕೂಡಾ ನಿರ್ಮಾಣ ಮಾಡಲಾಗಿಲ್ಲ. ಜನರಿಗೆ ಉಚಿತ ಅಕ್ಕಿ ನೀಡುವ ಯೋಜನೆ ಪ್ರಾರಂಭಿಸಿದ್ವಿ. ಆದರೆ, ಇಂದು ಕೀಳುಮಟ್ಟದ ಅಕ್ಕಿಯನ್ನು ಜನರಿಗೆ ನೀಡಲಾಗುತ್ತಿದೆ ಎಂದ ಅವರು, ಬಿಜೆಪಿ ಸರ್ಕಾರ ಜನರಿಗೆ ಸಾಕಷ್ಟು ಕೋಪ ಬರಿಸಿದ್ದಾಯ್ತು, ಬೆಲೆ ಏರಿಕೆ ಮಾಡಿದ್ದಾಯ್ತು, ಜನರನ್ನು ದಾರಿ ತಪ್ಪಿಸಿದ್ದಾಯ್ತು. ನಿಮ್ಮನ್ನು ಸಂಘರ್ಷಕ್ಕೆ ಒಳಗಾಗಿಸಿ ಇನ್ನೊಬ್ಬರು ಲಾಭ ಪಡೆಯುತ್ತಿದ್ದಾರೆ, ಎಚ್ಚೆತ್ತುಕೊಳ್ಳಿ. ಯಾರು ಮಾತು ಉಳಿಸಿಕೊಂಡಿದ್ದಾರೆ, ಯಾರು ತಪ್ಪಿದ್ದಾರೆಂದು ನೋಡಿಕೊಂಡು ಮತ ಚಲಾಯಿಸಿ ಎಂದು ಕಿವಿಮಾತು ಹೇಳಿದರು.
ನಾನೇನು ಮಾಡಿಲ್ಲ, ಆದರೆ ಇಂದಿರಾ ಗಾಂಧಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಿರಿಯರು ಇಂದಿಗೂ ನನ್ನನ್ನು ಭೇಟಿಯಾದಾಗ ಇಂದಿರಾ ಗಾಂಧಿಯವರನ್ನು ನೆನಪು ಮಾಡಿಕೊಳ್ಳುತ್ತಾರೆ. ನಾನು ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡ್ತೇನೆ, ನನ್ನಂತೆ ಜನಸಾಮಾನ್ಯರು ಕೂಡಾ ಜೀವನ ನಡೆಸುತ್ತಾರೆ. ಯಾರಿಂದ ಬೆಲೆ ಏರಿಕೆ ಕಡಿಮೆಯಾಗ್ತದೆ, ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಉದ್ಯೋಗ, ಭವಿಷ್ಯ ದೊರೆಯುತ್ತದೆ ಎಂದು ನಿರ್ಧರಿಸಿ. ನಾರಾಯಣ ಗುರು, ಬಸವಣ್ಣ ಹುಟ್ಟಿದ ನಾಡಿನ ಜನರು ಸತ್ಯದ ಮಾರ್ಗದಲ್ಲಿ ಸಾಗಿ, ನೈಜತೆ ಅರಿತುಕೊಳ್ಳಿ. ಬಿಜೆಪಿ ಸರಕಾರ ಕರ್ನಾಟಕದಲ್ಲಿ ಮಹಿಳೆಯರಿಗಾಗಿ 24 ಯೋಜನೆಯ ಆಶ್ವಾಸನೆ ನೀಡಿ, 2 ಮಾತ್ರ ಜಾರಿಗೊಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.