ಕಾರವಾರ: ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ತಮ್ಮ ಶಾಸಕ ಸ್ಥಾನಕ್ಕೆ ರವಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಅವರಿಗೆ ಸಲ್ಲಿಸಿದರು.
ಜಗದೀಶ್ ಶೆಟ್ಟರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಗೆ ಬಂದ ವೇಳೆ ಕಾಗೇರಿ ಅವರು ಸಂಧಾನಕ್ಕೆ ಮುಂದಾಗಿದ್ದರು. ತಮ್ಮ ಖಾಸಗಿ ಕೊಠಡಿಗೆ ಶೆಟ್ಟರ್ ಅವರನ್ನು ಕರೆದುಕೊಂಡು ಹೋಗಿ ಒಂದು ಗಂಟೆ ಕಾಲ ಚರ್ಚಿಸಿದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಗೇರಿ ಅವರಿಗೆ ಕರೆ ಮಾಡಿ ಶೆಟ್ಟರ್ ಅವರ ಮನವೊಲಿಸಲು ಪ್ರಯತ್ನಪಟ್ಟರು ಎಂದು ತಿಳಿದುಬಂದಿದೆ.
ಆದರೆ, ಯಾವ ಸಂಧಾನಕ್ಕೂ ಶೆಟ್ಟರ್ ಒಪ್ಪಿಲ್ಲ. ಕೊನೆಗೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿ ಅವರ ಕಚೇರಿಯಿಂದ ಹೊರ ಬಂದಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದೇನೆ. ಆದರೆ, ಇದನ್ನೆಲ್ಲ ಅರ್ಥಮಾಡಿಕೊಳ್ಳದೇ ಮೂಲ ಬಿಜೆಪಿಗರನ್ನು ಪಕ್ಷದಿಂದ ಹೊರಹಾಕಲಾಗುತ್ತಿದೆ. ಇದು ಮಾನಸಿಕವಾಗಿ ಬೇಸರ ತರಿಸಿದೆ. ಈಗ ನನ್ನ ಮನೆಯಿಂದಲೇ ನನ್ನ ಹೊರದಬ್ಬಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.
ನಾನು ದೊಡ್ಡ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ. ವಯಸ್ಸಿದೆ, ಅನಾರೋಗ್ಯವಿಲ್ಲ, ಸಿಡಿ ವಿಚಾರ ಇಲ್ಲ. 30 ವರ್ಷದಿಂದ ಪಕ್ಷ ಕಟ್ಟಿದ್ದೇನೆ. ಪಕ್ಷದ ಬೆಳವಣಿಗೆಗೆ ಕೊಡುಗೆ ನೀಡಿದ್ದೇನೆ. ನನಗೆ ಶಾಸಕನಾಗಿ ಕೆಲಸ ಮಾಡೋ ಅವಕಾಶ ಕೊಟ್ಟರೆ ಸಾಕಿತ್ತು. ಆದರೆ ಯಾವುದೇ ಮುನ್ಸೂಚನೆ ಇಲ್ಲದೇ ಈ ರೀತಿ ಮಾಡಿದ್ದು ಬೇಸರ ತಂದಿದೆ ಎಂದರು.
ಯಾವ ತಪ್ಪು ಇದೆ ಎಂದು ನನಗೆ ಟಿಕೆಟ್ ತಪ್ಪಿಸಿದ್ರು ಇದು ಸರಿಯಲ್ಲ. ಈ ಬಗ್ಗೆ ರಾಜ್ಯ ನಾಯಕರು, ಪಕ್ಷದ ವರಿಷ್ಠರು ಸ್ಪಷ್ಟನೆ ನೀಡಲೇ ಇಲ್ಲ. ಬಿ ಎಸ್ ಯಡಿಯೂರಪ್ಪ ನನ್ನ ಪರವಾಗಿ ಮಾತನಾಡಿದ್ದರು. ಆದರೆ ಈಗ ಮೇಲಿನ ನಾಯಕರ ಕಾರಣದಿಂದ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಏಕೆ ಈ ಹಿಂದೆ ಕೆಜೆಪಿ ಸ್ಥಾಪನೆ ಮಾಡಿದ್ದರು ಎಂದು ಅವರು ಉತ್ತರಿಸಲಿ ಎಂದು ಶೆಟ್ಟರ್ ಹೇಳಿದ್ದಾರೆ.