ಕಾರವಾರ: ಕಾರವಾರದ ಆಸ್ಪತ್ರೆಯೂ ಶೀಘ್ರವೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಲಿ ಎಂದು ಗೋವಾ ಮೆಡಿಕಲ್ ಕಾಲೇಜ್ನ ಡೀನ್ ಮತ್ತು ನಿರ್ದೇಶಕ ಡಾ.ಶಿವಾನಂದ ಎಂ.ಬಾಂದೇಕರ್ ಹೇಳಿದರು. ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್) ಆವರಣದಲ್ಲಿ ಆಯೋಜಿಸಿದ್ದ 2017ನೇ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಪದವಿ ಪಡೆದು ಸುಮ್ಮನಾಗುವ ಬದಲು ತಜ್ಞ ವೈದ್ಯರಾಗುವತ್ತ ಗಮನಹರಿಸಬೇಕು. ರೋಗ ತಪಾಸಣೆಯ ಜತೆಗೆ ರೋಗಿಗಳ ಜತೆ ಸಹನೆಯಿಂದ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳಿ ಎಂದು ವೈದ್ಯಕೀಯ ಪದವೀಧರರಿಗೆ ಸಲಹೆ ನೀಡಿದರು.
ಹುಬ್ಬಳ್ಳಿ ಕಿಮ್ಸ್ ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ,ಕನಸು ಕಟ್ಟಿಕೊಳ್ಳಬೇಕು ಅದನ್ನು ಸಾಧಿಸಲು ನಿರಂತರ ಪ್ರಯತ್ನ ನಡೆಯಬೇಕು ಆಗ ಮಾತ್ರ ಯಶಸ್ಸು ಸಾಧ್ಯ. ವೈದ್ಯಕೀಯ ಪದವಿ ಪಡೆದರೆ ಸಾಧನೆಯಾಗದು. ತಜ್ಞ ವೈದ್ಯರಾಗಿ ಸಮಾಜಕ್ಕೆ ಹೇಗೆ ಸೇವೆ ಸಲ್ಲಿಸುತ್ತೀರಿ ಎಂಬುದರ ಮೇಲೆ ನಿಮ್ಮ ಸಾಧನೆಯ ಪರಿಮಾಣ ನಿರ್ಧಾರವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರಿಮ್ಸ್ ಡೀನ್ ಡಾ.ಗಜಾನನ ನಾಯಕ, ವೈದ್ಯಕೀಯ ಪದವೀಧರರು ಮಾತೃ ಸಂಸ್ಥೆ ಮರೆಯಬಾರದು. ವೃತ್ತಿಯನ್ನು ತಾಯಿಯಂತೆ ಪ್ರೀತಿಸಬೇಕು ಎಂದರು. ಕಿಮ್ಸ್ ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಅರುಣಕುಮಾರ ಸಿ. ಮಾತನಾಡಿದರು. ಕ್ರಿಮ್ಸ್ ಪ್ರಾಂಶುಪಾಲ ಡಾ.ಶಿವಕುಮಾರ ಜಿ.ಎಲ್., ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್, ಡಾ.ಮಂಜುನಾಥ ಭಟ್, ಡಾ.ಮಂಜುನಾಥ ಕೆ.ಟಿ., ಇತರರು ಇದ್ದರು.