ಕಾರವಾರ: ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ನಗರದ ಬೈತಖೋಲದಲ್ಲಿ ಗುಡ್ಡ ಕುಸಿಯುವ ಆತಂಕ ಶನಿವಾರ ಸೃಷ್ಟಿಯಾಗಿದೆ. ಬೈತಖೋಲದ ಭೂದೇವಿ ಗುಡ್ಡದಲ್ಲಿ ನೌಕಾಸೇನೆಯು ರಸ್ತೆ ನಿರ್ಮಾಣ ಮಾಡಿದ್ದರಿಂದ ಗುಡ್ಡದ ಕೆಳಗಿನ ಮನೆಗಳಿಗೆ ಮಳೆ ನೀರು ನುಗ್ಗಲಾರಂಭಿಸಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಇಲ್ಲಿನ ಭೂದೇವಿ ದೇವಸ್ಥಾನದ ಸಮೀಪದ ಗುಡ್ಡದ ಮೇಲೆ ನೌಕಾಸೇನೆಯು ಸಾರ್ವಜನಿಕರ ವಿರೋಧದ ನಡುವೆಯೂ ಜೆಸಿಬಿಯಿಂದ ಗುಡ್ಡ ಅಗೆದು ರಸ್ತೆ ಮಾಡಿದೆ. ಇದರಿಂದ ಗುಡ್ಡದಿಂದ ಹರಿದು ಬರುವ ಮಳೆ ನೀರಿನ ಧಿಕ್ಕು ಬದಲಾಗಿದೆ. ಗುಡ್ಡದಿಂದ ಬರುವ ಮಣ್ಣು, ಕಲ್ಲು ಮಿಶ್ರಿತ ನೀರು ಮನೆಗಳಿಗೆ ನುಗ್ಗುತ್ತಿದೆ. ಜನರಿಗೆ ವಿಪರೀತ ಸಮಸ್ಯೆ ಉಂಟಾಗಿದೆ. ಶನಿವಾರ ಬೆಳಗ್ಗೆ ಜೋರು ಮಳೆಯಾದಾಗ ಗುಡ್ಡದ ನೀರು ಮನೆಗಳಿಗೆ ನುಗ್ಗಿದೆ.
ಸ್ಥಳೀಯರು ಆ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಕೂಡಲೇ ನೌಕಾನೆಲೆ ಅಧಿಕಾರಿಗಳಿಗೆ ವಿಷಯ ತಿಳಿಸಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಬೈತಖೋಲ್, ಅಲಿಗದ್ದಾ ನಿವಾಸಿತರ ಸಂಘದ ಅಧ್ಯಕ್ಷ ಪ್ರೀತಮ ಮಾಸೂರಕರ ಆಗ್ರಹಿಸಿದ್ದಾರೆ.