ಸುಳ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಹಾಲಿ ಸಚಿವ ಹಾಗೂ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರರಿಗೆ ಕೋಕ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಸಚಿವ ಎಸ್.ಅಂಗಾರ ರಾಜಕೀಯ ನಿವೃತ್ತಿ ಕುರಿತು ಮಾತನಾಡಿದ್ದಾರೆ.
ಸತತ ಆರು ಬಾರಿ ಗೆದ್ದರೂ ಯಾವುದೇ ಲಾಬಿ ಮಾಡದೇ ಪಕ್ಷನಿಷ್ಠನಾಗಿ ಕೆಲಸ ಮಾಡಿದ್ದಕ್ಕೆ ಬಿಜೆಪಿ ತಕ್ಕ ಪಾಠ ಕಲಿಸಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲವಾಗಿದೆ. ಹೀಗಾಗಿ ಇನ್ಮುಂದೆ ಚುನಾವಣೆ ಹಾಗೂ ರಾಜಕಾರಣಕ್ಕೆ ನಾನಿಲ್ಲ. ಪಕ್ಷ ಆಯ್ಕೆ ಮಾಡಿದ ಅಭ್ಯರ್ಥಿ ಪರ ಪ್ರಚಾರಕ್ಕೂ ಹೋಗಲಾರೆ ಎಂದು ಸಚಿವ ಎಸ್.ಅಂಗಾರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಳ್ಯ ಶಾಸಕರಿಗೆ ಹಿರಿತನದ ಆಧಾರದಲ್ಲಿ ಪಕ್ಷ ಟಿಕೆಟ್ ನೀಡದೇ ಇರುವುದು ಸುಳ್ಯದ ಬಿಜೆಪಿ ವಲಯದಲ್ಲಿ ಅಸಮಾಧಾನದ ಕಟ್ಟೆ ಒಡೆಯುವಂತೆ ಮಾಡಿದೆ. ಸದ್ಯ ಕ್ಷೇತ್ರಕ್ಕೆ ಭಾಗೀರಥಿ ಮುರುಳ್ಯರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದೆ.