ಕಾರವಾರ: ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿ ಬಿಜೆಪಿಯು ಕಾರವಾರ-ಅಂಕೋಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಸಲಿದೆ ಎನ್ನುವ ಮಾಹಿತಿ ಇದೆ. ಅವರ ಕಾರ್ಯಕ್ರಮಕ್ಕೆ ರಕ್ಷಣಾ ಇಲಾಖೆಯ ಜಮೀನು ಬಳಸಿಕೊಂಡರೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ಎಐಸಿಸಿ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಕ್ಷಣಾ ಇಲಾಖೆ ಜಮೀನಿನಲ್ಲಿ ಚುನಾವಣಾ ಪ್ರಚಾರ ಮಾಡಿದರೆ ಅದು ನೀತಿ ಸಂಹಿತೆ ಉಲ್ಲಂಘನೆ ಆಗಲಿದೆ ಎಂದ ಅವರು ಇಡಿ, ಸಿಬಿಐ, ಐಟಿ, ರಕ್ಷಣಾ ಇಲಾಖೆ ಸೇರಿದಂತೆ ಎಲ್ಲವನ್ನೂ ಬಿಜೆಪಿ ಎಲ್ಲವನ್ನೂ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅವರು ದೂರಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ ಅವರು ರಾಜ್ಯಕ್ಕೆ ಬಂದು ಎಷ್ಟೇ ಪ್ರಚಾರ ಮಾಡಲಿದೆ. ಆದರೆ, ರಾಜ್ಯದ ಜನ ತ್ರಿವಿಕ್ರಮರು, ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹರಿಪ್ರಸಾದ ತಿಳಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಒಂದೆರಡು ಕಡೆ ಇರುವ ಅಸಮಾಧಾನವನ್ನು ಶಮನಗೊಳಿಸಲಾಗಿದೆ. ಜಿಲ್ಲೆಯ ಆರಕ್ಕೆ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದರು.
`ನಾ ಖಾವೂಂಗಾ ನಾ ಖಾನೆದೂಂಗಾ’ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿಕೋ ಖಾನೆ ದೂಂಗಾ ಜೌರ್ ಕಿಸಿಕೋ ಖಾನೆದೂಂಗಾ ಎಂದು ಹೇಳುತ್ತಿದ್ದಾರೆ. ಎಸ್ಬಿಐ ಮತ್ತು ಎಲ್ಐಸಿಗೆ ಅದಾನಿ ಅವರು 75 ಸಾವಿರ ಕೋಟಿ ಪಂಗನಾಮ ಹಾಕಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಘೋಷಣೆ ಮಾಡುವುದಿಲ್ಲ. ಶಾಸಕರು ಆಯ್ಕೆಯಾದ ನಂತರದಲ್ಲಿ ಅವರು ಕುಳಿತು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಆದರೆ, ಬಿಜೆಪಿಯಲ್ಲಿ ಹಾಗಿಲ್ಲ. ಮುಖ್ಯಮಂತ್ರಿ ಆಗಬೇಕೆದಂತೆ ಎರಡು ಸಾವಿರ ಕೋಟಿ ಕೊಡಬೇಕು. ಇದನ್ನು ಬಿಜೆಪಿ ಶಾಶಕ ಬಸವರಾಜ ಪಾಟೀಲ ಯತ್ನಾಳ ಅವರೇ ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.