ಉಡುಪಿ: ಸಿದ್ದರಾಮಯ್ಯ 10 ಕೆಜಿ ಅಕ್ಕಿ ಎಲ್ಲಿಂದ ಕೊಡುತ್ತಾರೆ. ಅವರ ಸ್ವಂತ ಕಿಸೆಯಿಂದ ಕೊಡುವುದಲ್ಲ. ಅದು ಕೇಂದ್ರ ಸರಕಾರದ ದುಡ್ಡು. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನೀಡಲಾದ ಎಲ್ಲ ಯೋಜನೆಗಳಿಗೆ ದುಡ್ಡು ಕೊಟ್ಟದ್ದು ಕೇಂದ್ರದ ಮೋದಿ ಸರಕಾರ. ನರೇಂದ್ರ ಮೋದಿ ಅವರ ಹಣ, ಸಿದ್ದರಾಮಯ್ಯನವರ ಹೆಸರು. ಇದು ಅವರು ಕಳೆದ ಅವಧಿಯಲ್ಲಿ ಮಾಡಿದ್ದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೊಮ್ಮೆ ಜನರಿಗೆ ಮೋಸ ಮಾಡಬಹುದೆಂದು ಸಿದ್ದರಾಮಯ್ಯ ಯೋಚನೆ ಮಾಡುತ್ತಿದ್ದಾರೆ. ಆದ್ರೆ ಕರ್ನಾಟಕದವರು ವಿದ್ಯಾವಂತ, ಬುದ್ಧಿವಂತ ಜನ. ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಿದಾಗ ಏನು ಮಾಡಿದ್ರು. ಯಾವ ರೀತಿ ಜಾತಿವಾದ ತಂದ್ರು. ಹೇಗೆ ಧರ್ಮ ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ರು. ಇದೆಲ್ಲವನ್ನು ರಾಜ್ಯದ ಜನ ನೋಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ದೇಶದ 84 ಕೋಟಿ ಜನರಿಗೆ ಕೇಂದ್ರ ಸರಕಾರ ಪಡಿತರ ಅಕ್ಕಿ ಕೊಡುತ್ತಿದೆ. 36 ರೂ. ಗೆ ಒಂದು ಕೆಜಿ ಅಕ್ಕಿ ಖರೀದಿಸಿ, 3 ರೂ. ದರದಲ್ಲಿ ರಾಜ್ಯ ಸರಕಾರಗಳಿಗೆ ಕೊಡುತ್ತಿದೆ. ಒಂದು ಕೆಜಿ ಗೋಧಿಯನ್ನು 26ರೂ.ಗೆ ಖರೀದಿಸಿ ರಾಜ್ಯಗಳಿಗೆ 2 ರೂ. ದರದಲ್ಲಿ ನೀಡುತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಕೇಂದ್ರ ಸರಕಾರ 1.60 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದೆ ಎಂದರು.
ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ. ನಾನು ಮತ್ತೊಮ್ಮೆ ಸಿಎಂ ಆದ್ರೆ, ಮೊದಲು ಮಾಡುವ ಕೆಲಸ ಮುಸಲ್ಮಾನರಿಗೆ ಹೆಚ್ಚುವರಿಯಾಗಿ 10ಕೋಟಿ ರೂ. ಕಾಯ್ದಿರಿಸುತ್ತೇನೆ ಎಂದಿದ್ದಾರೆ. ಅವರು ಯಾರಿಗೂ ದುಡ್ಡು ಕೊಡಬಹುದು. ಆದ್ರೆ ಅದು ಸರಕಾರದ ಬೊಕ್ಕಸದ ಹಣ. ಎಲ್ಲ ಜಾತಿಯಲ್ಲೂ ಬಡವರಿದ್ದಾರೆ. ಅವರಿಗೆ ನ್ಯಾಯಯುತವಾಗಿ ಕೊಡಬೇಕಾದ ಹಣವನ್ನು ಧರ್ಮದ ವಿಚಾರ ಇಟ್ಟುಕೊಂಡು, ಕೇವಲ ಒಂದು ಧರ್ಮದ ವೋಟ್ ಬ್ಯಾಂಕ್ ಗಾಗಿ ಒಲೈಕೆ ಮಾಡುವುದು ಸರಿಯಲ್ಲ. ಹಾಗಾಗಿ ನನಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ ಎಂದು ಟೀಕಿಸಿದರು.