ಉಡುಪಿ: ಹೆರಿಗೆ ಸಂದರ್ಭದಲ್ಲಿ ಮೃತಪಟ್ಟ ಶಿಶುವೊಂದರ ಅಂತ್ಯಸಂಸ್ಕಾರ ನಡೆಸಲು ಹೆತ್ತವರಿಗೆ ಅಸಹಾಯಕತೆ ಎದುರಾದಾಗ ಪೊಲೀಸರು ಹಾಗೂ ಸಮಾಜ ಸೇವಕರೇ ಮುಂದೆ ನಿಂತು ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಿಹಾರ ಮೂಲದ ನಿವಾಸಿ ಅಜ್ಮೀರ್ ಉದ್ದಿನ್ ಎಂಬವರ ಪತ್ನಿ ಹೆರಿಗೆಗಾಗಿ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ, ಕೆಲಸ ಮಾಡುವ ಸಂದರ್ಭದಲ್ಲಿ ಹೊಟ್ಟೆಗೆ ಏಟು ಬಿದ್ದ ಪರಿಣಾಮ ನವಜಾತ ಶಿಶು ಹೊಟ್ಟೆಯಲ್ಲೆ ಸಾವನ್ನಪ್ಪಿದೆ. ಬಳಿಕ ದಂಪತಿಗೆ ಶಿಶುವಿನ ಅಂತ್ಯಸಂಸ್ಕಾರ ನಡೆಸಲು ಸಹಾಯಕತೆ ಎದುರಾಗಿತ್ತು. ಬಳಿಕ ಮಣಿಪಾಲ ಠಾಣೆಯ ಎಸ್ಐ ಸುಧಾಕರ್ ತೋನ್ಸೆ ಸಹಕಾರದೊಂದಿಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಶಿಶುವಿನ ದಫನ ಕಾರ್ಯ ನಡೆಸಿದರು.
ದುರಂತವೆಂದರೆ ಈ ಹಿಂದೆ ಕೂಡ ದಂಪತಿಯ ಮೂರು ಮಗು ಮರಣ ಹೊಂದಿತ್ತು. ಇದೀಗ ನಾಲ್ಕನೇ ಮಗು ಕೂಡ ಮೃತಪಟ್ಟಿರುವುದು ವಿಷಾದನೀಯ ಸಂಗತಿ.