ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಯೋಗಾಥಾನ್ ಕಾರ್ಯಕ್ರಮವನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿ, ಯೋಗಾಭ್ಯಾಸ ಮಾಡಿದರು.
ಯೋಗ ಪಟುಗಳು, ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿದರೆ, ರಾಜ್ಯಪಾಲರು ಅವರನ್ನು ಅನುಸರಿಸಿ ಯೋಗಾಭ್ಯಾಸ ಮಾಡಿ ಗಮನ ಸೆಳೆದರು. ಕ್ರೀಡಾ ಸಚಿವರಾದ ನಾರಾಯಣಗೌಡ, ಎಂಎಲ್ ಸಿ ಗೋವಿಂದ ಗೌಡ, ಆಯುಷ್ ಇಲಾಖೆ ಆಯುಕ್ತರಾದ ಜೆ ಮಂಜುನಾಥ್ ಸೇರಿದಂತೆ ಮುಂತಾದ ಗಣ್ಯರು ರಾಜ್ಯಪಾಲರಿಗೆ ಸಾಥ್ ನೀಡಿದರು.
ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ರಾಜ್ಯಪಾಲರು, ಭಾರತ ಸರ್ಕಾರದ ಯೋಜನೆಯಂತೆ 26 ನೇ ರಾಷ್ಟ್ರೀಯ ಯುವಜನೋತ್ಸವವನ್ನು ಕರ್ನಾಟಕದ ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಿರುವುದು ಸಂತಸದ ವಿಷಯ. ಮೆಗಾ ಯೋಗಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಶಿಕ್ಷಕರು ಹಾಗೂ 13 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಿನ್ನಿಸ್ ದಾಖಲೆ ನಿರ್ಮಿಸಲಿದ್ದಾರೆ. ಈ ಯೋಗಥಾನ್ “ಹರ್ ಘರ್ ಯೋಗ” ಜೊತೆಗೆ ಕರ್ನಾಟಕವನ್ನು ಭಾರತದ ಮೊದಲ ಯೋಗ ಸಾಕ್ಷರ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದರು.
“ಯೋಗ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ.” ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಂಘಟಿಸುತ್ತದೆ. ಇದು ವ್ಯಾಯಾಮದ ಬಗ್ಗೆ ಮಾತ್ರವಲ್ಲದೆ ಬ್ರಹ್ಮಾಂಡ ಮತ್ತು ಪ್ರಕೃತಿಯೊಂದಿಗೆ ಏಕತೆಯ ಅರ್ಥವನ್ನು ಕಂಡುಕೊಳ್ಳುವ ಬಗ್ಗೆಯೂ ಆಗಿದೆ. ಯೋಗವು ಆರೋಗ್ಯಕರ ಜೀವನವನ್ನು ನಡೆಸುವ ಕಲೆಯಾಗಿದೆ. ಯೋಗವು ಮಾನವನ ಮನಸ್ಸು ಮತ್ತು ಆತ್ಮದ ಅನಂತ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಆತ್ಮಜ್ಞಾನದ ಸಾಧನೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಧರ್ಮಗಳ ಸಂಸತ್ತಿನಲ್ಲಿ ಯೋಗದ ಗುಣಲಕ್ಷಣಗಳನ್ನು ಪ್ರಸ್ತಾಪಿಸಿದರು ಮತ್ತು ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 27 ಸೆಪ್ಟೆಂಬರ್ 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗ ಮಾಡಲು ಕರೆ ನೀಡಿದ್ದರು. ಇದಕ್ಕೆ 172 ದೇಶಗಳ ಬೆಂಬಲ ಸಿಕ್ಕಿದೆ. ಜೂನ್ 21 ರಂದು, ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಕೇವಲ 90 ದಿನಗಳಲ್ಲಿ ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯಗಳು ಬೆಳೆಯುತ್ತವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಾವೆಲ್ಲರೂ ಯೋಗದ ಮಹತ್ವವನ್ನು ಅರ್ಥಮಾಡಿಕೊಂಡಿದ್ದೇವೆ. ಯೋಗ ನಮ್ಮ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಈ ಸಂಸ್ಕೃತಿ ಅದನ್ನು ರಕ್ಷಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆ ಎಂದು ತಿಳಿಸಿದರು.