ಮೆಲ್ಬರ್ನ್ ನಗರ: ಪರ್ಯಾಯದ ಪೂರ್ವಭಾವಿಯಾಗಿ ವಿಶ್ವ ಪರ್ಯಟನೆ ನಡೆಸುತ್ತಿರುವ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರು ಮೆಲ್ಬರ್ನ್ ನ ಪುತ್ತಿಗೆ ಮಠದ “ಶ್ರೀ ವೆಂಕಟ ವೃಂದಾವನ”ದಲ್ಲಿ ಇಂದು ಉಡುಪಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
ಮಠದ ವಿದ್ವಾಂಸರು, ವೈದಿಕರು ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಈ ಐತಿಹಾಸಿಕ ಕ್ಷಣವನ್ನು ಮೆಲ್ಬೋರ್ನ್ನಲ್ಲಿರುವ ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಈ ದಿನವು ಎಷ್ಟು ವಿಶೇಷವಾಗಿತ್ತೆಂದರೆ 750 ವರ್ಷಗಳ ಹಿಂದೆ ಶ್ರೀ ಜಗದ್ಗುರು ಮಧ್ವಾಚಾರ್ಯರು ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ದಿನ ಇದೆ ಮಕರಸಂಕರಮಣದ ಪರ್ವಕಾಲವಾಗಿತ್ತು. ಅಂದು ಮಕರ ಸಂಕ್ರಮಣದ ಪರ್ವಕಾಲದಲ್ಲಿ ಆಚಾರ್ಯ ಮಧ್ವರು ದ್ವಾರಕೆಯಿಂದ ಕಡಲು ದಾಟಿ ಬಂದ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು.
ಇಂದು ಮಧ್ವ ಪರಂಪರೆಯ ಶಿಷ್ಯರು, ಭಾವಿ ಪರ್ಯಾಯ ಪೀಠಾಧಿಪತಿಗಳೂ ಅದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನ ಉತ್ಸವ ಮೂರ್ತಿಯನ್ನು ಕಡಲಾಚೆಯ ಮೆಲ್ಬರ್ನ್ ಮಹಾನಗರದಲ್ಲಿ, ಅದೇ ಮಕರ ಸಂಕ್ರಮಣದ ಪರ್ವಕಾಲದಲ್ಲಿ ಪ್ರತಿಷ್ಠಾಪಿಸಿದ್ದು, ಇದು ಇತಿಹಾಸ ಮರುಕಳಿಸಿದ ಅಪೂರ್ವ ಕ್ಷಣವಾಗಿದೆ.
ಪ್ರತಿಷ್ಠೆಯ ಪೂರ್ವಭಾವಿಯಾಗಿ ಹಿಂದಿನ ದಿವಸ , ಕೃಷ್ಣನ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ತಂದು, ಬಿಂಬಶುದ್ಧಿ, ವಾಸ್ತು ಹೋಮ, ಅಧಿವಾಸ ಪೂಜೆ ಇತ್ಯಾದಿಗಳನ್ನು ನೆರವೇರಿಸಲಾಯಿತು.