ಉಡುಪಿ: ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಪೌರಾಯುಕ್ತ ರಾಯಪ್ಪ ಅವರ ಆದೇಶದಂತೆ ಇಂದ್ರಾಳಿಯ ಸೇತುವೆಯಲ್ಲಿದ್ದ ರಾಷ್ಟ್ರೀಯ ಲಾಂಛನವನ್ನು ಶುಚಿಗೊಳಿಸಿ ದುರಸ್ಥಿಗೊಳಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ- ಇಂದ್ರಾಳಿಯ ರೈಲ್ವೆ ಸೇತುವೆಯ ಬಳಿ ನಾಲ್ಕು ಕಂಬಗಳಲ್ಲಿ ರಾಷ್ಟ್ರೀಯ ಲಾಂಛನ ಗಿಡದ ಬಳ್ಳಿಗಳಿಂದ ಆವರಿಸಿಕೊಂಡಿತ್ತು. ಅಲ್ಲದೆ, ಕೇಬಲ್ ವಯರ್ ಗಳಿಂದ ಬಂಧಿಸಿಟ್ಟ ಸ್ಥಿತಿಯಲ್ಲಿತ್ತು. ರಾಷ್ಟ್ರೀಯ ಲಾಂಛನವೆಂದು ಗೌರವಿಸಲ್ಪಡುವ ಲಾಂಛನ ಶೋಚನೀಯ ಸ್ಥಿತಿಯಲ್ಲಿರುವುದನ್ನು ಕಂಡ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಸುವ್ಯವಸ್ಥೆಗೊಳಿಸುವಂತೆ ಆಗ್ರಹಿಸಿದ್ದರು.
ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ರಾಷ್ಟ್ರೀಯ ಲಾಂಛನಗಳನ್ನು ದುರಸ್ತಿ ಮಾಡುವಂತೆ ನಗರಸಭೆಯ ಪೌರಾಯುಕ್ತ ರಾಯಪ್ಪನವರಿಗೆ ಸೂಚನೆ ನೀಡಿತ್ತು. ಅದರಂತೆ ಇಂದು ಪೌರಾಯುಕ್ತರ ಆದೇಶದ ಮೇರೆಗೆ ರಾಷ್ಟ್ರೀಯ ಲಾಂಛನವನ್ನು ಶುಚಿಗೊಳಿಸಿ ದುರಸ್ಥಿಗೊಳಿಸಲಾಯಿತು.